ಮೈಸೂರು: ಇಂದಿನ ಪೀಳಿಗೆಯವರು ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿಕೊಂಡು ದೇಶದ ಇತಿಹಾಸವನ್ನು ವಸ್ತುನಿಷ್ಠವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ರಾಮಕೃಷ್ಣ ಮಠದ ಮುಕ್ತಿದಾನಂದ ಮಹಾರಾಜ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಜ್ಞಾತವಾಸದ ಒಡನಾಡಿಗಳು ಅನುವಾದಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುಭಾಷ್ ಚಂದ್ರಬೋಷ್ ಅವರ ಬದುಕು ಸಾಹಸ ಮತ್ತು ಧೈರ್ಯದ ಸಂಕೇತ. ಸುಭಾಷ್ ಚಂದ್ರಬೋಸ್ ಅವರ ಬಗ್ಗೆ ನಿಗೂಢವಾಗಿ ಉಳಿದ ವಿಷಯಗಳನ್ನು ಚಂದ್ರಶೇಖರ್ ಅವರು ಅದ್ಭುತವಾಗಿ ಸೆರೆಹಿಡಿದು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬೋಸ್ ಅವರು ಈ ಹಿಂದೆಯೇ ಇಂದಿನ ಐಎಎಸ್ ಹುದ್ದೆಗೆ ಸಮನಾದ ಐಸಿಎಸ್ ಪರೀಕ್ಷೆಯನ್ನು ಬ್ರಿಟನ್ನಿನಲ್ಲಿ ಬರೆದು ತೇರ್ಗಡೆಗೊಂಡವರು. ಬ್ರಿಟೀಷರ ದುರಾಡಳಿತದ ವಿರುದ್ಧ ಸಮರ ಸಾರಲು ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಚಳವಳಿಗೆ ತಮ್ಮ ಬದುಕನ್ನು ಸಮರ್ಪಣೆ ಮಾಡಿಕೊಂಡರು. ಕಾಂಗ್ರೆಸ್ ಸೇರಿಕೊಂಡು ಗಾಂಧೀಜಿ ಜೊತೆಗೂಡಿ ದೇಶಾದ್ಯಂತ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು ಎಂದು ಹೇಳಿದರು.
ಬೋಸ್ ಅವರು ಗಾಂಧಿಯಷ್ಟೇ ಪ್ರಭಾವ ಹೊಂದಿದ್ದರು. ಗಾಂಧಿಜಿ ಅವರೊಂದಿಗೆ ಸಾಕಷ್ಟು ಭಿನ್ನಾಭಿಪ್ರಾಯವಿತ್ತು. ಗಾಂಧೀಜಿ ಅವರ ಕೆಲವು ಸಂಗತಿಗಳು ಬೋಸ್ಗೆ ಇಷ್ಟವಾಗದ ಕಾರಣ ಅವರಿಂದ ಅಂತರ ಕಾಯ್ದುಕೊಂಡು ಸ್ವತಂತ್ರವಾಗಿ ಬ್ರಿಟೀಷರ ವಿರುದ್ಧ ಶಸ್ತ್ರ ಹೋರಾಟಕ್ಕೆ ಮುಂದಾದರು. ಅದಕ್ಕಾಗಿ ಜರ್ಮನಿ, ರಷ್ಯಾ, ಜಪಾನ್ಗೆ ಭೇಟಿ ನೀಡಿ ಅಲ್ಲಿನ ನಾಯಕರ ಸಹಕಾರ ಪಡೆದುಕೊಂಡರು. ಇದರಿಂದ ಬ್ರಿಟೀಷರು ಭಯಭೀತರಾಗಿದ್ದರು. ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಇಂದಿನ ಯುವಕರು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮಲ್ಲಿ ಇದ್ದ ವೈಮನಸ್ಸು, ಅಸೂಯೆಯಿಂದ ಬ್ರಿಟೀಷರು ನಮ್ಮನ್ನು ೨೦೦ ವರ್ಷಗಳ ಕಾಲ ಆಳ್ವಿಕೆ ಮಾಡಲು ಸಾಧ್ಯವಾಯಿತು. ನಮ್ಮಲ್ಲಿ ಸಾಕಷ್ಟು ರಾಜರಿದ್ದರೂ ಒಗ್ಗಟ್ಟಿರಲಿಲ್ಲ. ಇದು ಬ್ರಿಟೀಷರಿಗೆ ವರವಾಯಿತು ಎಂದು ಹೇಳಿದರು. ಇಂದು ಮೊಬೈಲ್ ಯುಗ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕೆ ಹೊರತು ಅದೇ ನಿಮ್ಮ ಬದುಕಿಗೆ ಮುಳುವಾಗಬಾರದು ಎಂದು ಹೇಳಿದರು.
ವಿಶ್ವಕನ್ನಡ ಸಮ್ಮೇಳನದಲ್ಲಿ ಕುವೆಂಪು ಅವರು ಕನ್ನಡ ಭಾಷೆ ಬೆಳವಣಿಗೆ ಕುರಿತು ಒತ್ತಿ ಹೇಳಿದ್ದರು. ಯಾವುದೇ ಭಾಷೆ ಬೆಳೆಯಬೇಕಾದರೆ ಆ ಭಾಷೆಯಲ್ಲಿ ಜಗತ್ತಿನ ಇತರೆ ಭಾಷೆಗಳಲ್ಲಿ ಅಡಕವಾಗಿರುವ ಜ್ಞಾನ ಆಯಾ ಮಾತೃ ಭಾಷೆಯಲ್ಲಿ ಸಿಗಬೇಕು ಎಂದು ಹೇಳಿದ್ದಾರೆ. ಸಂಸ್ಕೃತ ಭಾಷೆಯಲ್ಲಿ ಅಪಾರ ಜ್ಞಾನವಿದೆ ಎಂದು ರಷ್ಯಾದಲ್ಲಿ ಅನೇಕರು ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಾರೆ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಜಿಲ್ಲಾ ಅಧ್ಯಕ್ಷ ಗುಂಡಪ್ಪ, ಪ್ರೊ.ಜಿ.ಚಂದ್ರಶೇಖರ್, ಕಾರ್ಯದರ್ಶಿ ಪಿ.ವಿಶ್ವನಾಥ, ಡಾ.ಎಂ.ಶಿವಲಿಂಗೆಗೌಡ, ಹಾಗೂ ಇತರರು ಹಾಜರಿದ್ದರು.