ಮೈಸೂರು: ಮುಳ್ಳೂರು ಬೆಟ್ಟದಿಂದ ಆಹಾರ ಅರಸಿ ಬಂದ ಐದು ಕಾಡಾನೆಗಳು ಹೊಸಬಿರ್ವಾಳ್ ಗ್ರಾಮದ ರೈತರ ಜಮೀನಿಗೆ ನುಗ್ಗಿ ಕಬ್ಬು ಸೇರಿದಂತೆ ಇತರೆ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದ ಘಟನೆ ನಡೆದಿದ್ದು, ರೈತರು ಭಯಭೀತರಾಗಿದ್ದಾರೆ.
ಸರಗೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗು ವನ್ಯಜೀವಿ ಧಾಮದಲ್ಲಿರುವ ಹೊಸಬಿರ್ವಾಳ್ ಗೆ ಮುಳ್ಳೂರು ಬೆಟ್ಟದಿಂದ ಬಂದ ಕಾಡಾನೆಗಳು ನೀರು ಕುಡಿದು ಕಬ್ಬಿನ ಗದ್ದೆಗೆ ನುಗ್ಗಿವೆ. ಕಾಡಾನೆಗಳನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಮುಂದಾದಾಗ ಅವು ಅಡ್ಡಾದಿಟ್ಟಿಯಾಗಿ ಓಡಾಡಿ ರೈತರ ಜಮೀನಿಗೆ ನುಗ್ಗಿ ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ನಾಶ ಮಾಡಿವೆ.
ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಅಧಿಕಾರಿಗಳು ಹಲವು ಪ್ರಯತ್ನ ಮಾಡಿದರೂ ಜನ ಸ್ಥಳಕ್ಕೆ ತಂಡೋಪತಂಡವಾಗಿ ಬಂದು ಗದ್ದಲ ಎಬ್ಬಿಸಿದ್ದರಿಂದ ಪರದಾಡುವಂತಾಯಿತು. ನುಗು ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ನಿವೇದಿತಾ ಮಾತನಾಡಿ, ಕಾಡಾನೆಗಳು ಆಹಾರ ಹುಡುಕುತ್ತಾ ಮುಳ್ಳೂರು ಬೆಟ್ಟದಿಂದ ಹೊಸ ಬಿರ್ವಾಳು ಕಡೆ ಬಂದಿವೆ. ಇವುಗಳನ್ನು ಕಾಡಿಗೆ ಓಡಿಸಲು ನಾವು ಮತ್ತು ನಮ್ಮ ಸಿಬ್ಬಂದಿ ಸಾಕಷ್ಟು ಪಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.