ಮೈಸೂರು: ಪ್ರತಿದಿನ ಮಕ್ಕಳು ಪೌಷ್ಠಿಕಾಂಶಭರಿತವಾದ ಸಮತೋಲನ ಆಹಾರ ಸೇವನೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಚೈತನ್ಯಶೀಲತೆ ಉಕ್ಕಿ, ಉಲ್ಲಾಸದಾಯಕ ಕಲಿಕಾ ವಾತಾವರಣದ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ ನುಡಿದರು.
ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಪೋಷಣ್ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಕ್ಕಳಲ್ಲಿ ವಯೋಮಾನಕ್ಕೆ ತಕ್ಕಂತೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗಿದ್ದಾಗ ಕಲಿಕೆಯ ಮಟ್ಟವು ಇಮ್ಮಡಿಯಾಗುತ್ತದೆ ಎಂದರು.
ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ತಮ ದೇಹದಾರ್ಢ್ಯತೆ ಬೇಕು. ಹಾಗೆಯೇ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತಮ ಮಾನಸಿಕ ಆರೋಗ್ಯ ಇರಬೇಕು. ಆದ್ದರಿಂದ ಮಕ್ಕಳು ಸಮಯಕ್ಕೆ ಸರಿಯಾಗಿ ಪೋಷಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ಕರೆ ನೀಡಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಪ್ರೌಢಶಾಲಾ ಶಿಕ್ಷಕರ ಸಂಘದ ಖಜಾಂಚಿ ಎನ್. ಸುರೇಶ್ ಕುಮಾರ್ ಮಾತನಾಡಿ, ಆರೋಗ್ಯವಂತ ಸದೃಢ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರ ಆಶಯದಂತೆ ಸರ್ಕಾರಿ ಶಾಲೆಗಳಲ್ಲಿ ಪೋಷಣ್ ಅಭಿಯಾನ ನಡೆಯುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸೊಪ್ಪು, ತರಕಾರಿ, ಹಣ್ಣುಗಳ ಸೇವಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕಿ ಕೆ.ವಿ. ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕಿ ಪಿ.ಎನ್. ವೀಣಾ ಹಾಗೂ ಪದವೀಧರ ಶಿಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ಆರೋಗ್ಯ ಸಂರಕ್ಷಣೆ, ಪೌಷ್ಟಿಕಾಂಶ ಆಹಾರ, ವೈಯಕ್ತಿಕ ಸ್ವಚ್ಚತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಹಸಿ ಸೊಪ್ಪುಗಳು, ತರಕಾರಿಗಳು, ಹಣ್ಣುಗಳು, ಏಕ ದಳ ಮತ್ತು ದ್ವಿದಳ ಧಾನ್ಯಗಳನ್ನು ಬಳಸಿ ಭೂಪಟ, ಕಣ್ಣು, ಸಸ್ಯ, ಮರ, ಹೃದಯ, ಪಿತ್ತಕೋಶ, ಜೀರ್ಣಾಂಗ ವ್ಯೂಹ, ವಿಸರ್ಜನಾಂಗ ವ್ಯೂಹ, ರಂಗೋಲಿ ಆಕೃತಿಗಳನ್ನು ರಚಿಸಿ, ಆ ಮೂಲಕ ಉತ್ತಮ ದೈಹಿಕ ವಿಕಾಸಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುವ ಆಹಾರ ವಸ್ತುಗಳ ಕುರಿತು ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.