ಮೈಸೂರು: ದಸರಾ ಕವಿಗೋಷ್ಠಿ ಐದು ವಿಭಾಗಗಳಲ್ಲಿ ಸೆ.28ರಿಂದ ಅ.3ರವರೆಗೆ ನಡೆಯಲಿದ್ದು, ಈ ಸಂಬಂಧ ಕವಿಗೋಷ್ಠಿ ಪೋಸ್ಟರ್ ಅನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ದಸರಾ ಕವಿಗೋಷ್ಠಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮಾತನಾಡಿ, ನಾಡಿನ ವಿವಿಧ ಭಾಗಗಳ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದರಲ್ಲದೆ, ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ ಮತ್ತು ಪ್ರಧಾನ ಕವಿಗೋಷ್ಠಿಯ ನಡೆಯಲಿದೆ ಎಂದರು.
ಸೆ.28ರಂದು ಬೆಳಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಕವಿಗೋಷ್ಠಿಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್, ಕವಿ ಡಾ.ದೊಡ್ಡರಂಗೇಗೌಡ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11.30ಕ್ಕೆ ಹಾಸ್ಯ ಕವಿಗೋಷ್ಠಿ ನಡೆಯಲಿದ್ದು, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಭಾಗವಹಿಸಲಿದ್ದು, ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. 20 ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜಾನಪದ ಕಾವ್ಯ ಸಂಭ್ರಮದಲ್ಲಿ ಪ್ರೊ.ಪಿ.ಕೆ.ರಾಜಶೇಖರ್ ತಂಡ, ಡಾ.ಮಳವಳ್ಳಿ ಮಹದೇವಸ್ವಾಮಿ ತಂಡದವರು ಹಾಡಲಿದ್ದಾರೆ ಎಂದರು.
ಸೆ.29ರಂದು ಕ್ಲಾಸಿಕ್ ಕನ್ವೆನ್ಷನ್ ಹಾಲ್ನಲ್ಲಿ ಉರ್ದು ಕವಿಗೋಷ್ಠಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ ಭಾಗವಹಿಸುವರು. ೮ ರಾಜ್ಯಗಳ ಕವಿಗಳು ಭಾಗವಹಿಸಲಿದ್ದಾರೆ. ಸೆ.30ರಂದು ಬೆಳಗ್ಗೆ 10.30ಕ್ಕೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿಯಲ್ಲಿ 40 ಕವಿಗಳು ಭಾಗವಹಿಸುವವರು. ಶಾಸಕ ಜಿ.ಟಿ.ದೇವೇಗೌಡ, ಕವಿ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಭಾಗವಹಿಸಲಿದ್ದಾರೆ.
ಅ.1ರಂದು ಬೆಳಗ್ಗೆ 10.30ಕ್ಕೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಾದೇಶಿಕ ಕವಿಗೋಷ್ಠಿಯಲ್ಲಿ 40 ಕವಿಗಳು ಕವನ ವಾಚಿಸುವವರು. ಶಾಸಕ ಎಸ್.ಎ.ರಾಮದಾಸ್, ಕವಯತ್ರಿ ನೂತನ ದೋಶೆಟ್ಟಿ, ಮಧ್ಯಾಹ್ನ 2.30ಕ್ಕೆ ಚಿಗುರು ಕವಿಗೋಷ್ಠಿಯಲ್ಲಿ ಕವಯತ್ರಿ ಜ್ಯೋತಿ ಗುರುಪ್ರಸಾದ್, ಕವಿ ಡಾ.ಸಿ.ಪಿ.ಸಿದ್ಧಾಶ್ರಮ ಭಾಗವಹಿಸುವರು ಎಂದು ತಿಳಿಸಿದರು.
ಅ.3ರಂದು ಬೆಳಗ್ಗೆ 10.30ಕ್ಕೆ ಸೆನೆಟ್ ಭವನದಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದು, ನಾಟಕಕಾರ ಡಾ. ಎಚ್.ಎಸ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.