ವಿಜಯಪುರ: ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಇಂದು ಬೆಳಗ್ಗೆ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮಗಳು ಭವಾನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ತೊರವಿಯ ಸರಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ-97ರಲ್ಲಿ ಅವರು ಮತದಾನ ಮಾಡಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಗೆಲುವು ನಿಶ್ಚಿತ. ವಿಜಯಪುರದ ಬದಲಾವಣೆಗಾಗಿ ಜನರೇ ಮನಸ್ಸು ಮಾಡಿದ್ದಾರೆ. ಜಡವಾಗಿದ್ದ ಕ್ಷೇತ್ರದ ಅಭಿವೃದ್ಧಿಗೋಸ್ಕರ ಅವರು ಮತ ಚಲಾಯಿಸುತ್ತಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದಲ್ಲಿ ಹದಿನೆಂಟಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಸಾಧನೆ, ಕೇಂದ್ರದಲ್ಲಿ ನಮ್ಮದೇ ಸರಕಾರ ಬಂದರೆ ಸಿಗುವ ಯೋಜನೆಗಳು ನಮ್ಮ ಕೈಹಿಡಿಯಲಿವೆ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಗೊತ್ತಿಲ್ಲ. ಇವರ ಆಡಳಿತ ಮತ್ತು ಮೋದಿಯವರ ಭ್ರಮೆಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದರು.
ಆಲಗೂರ ಅವರ ಮಗಳು ಭವಾನಿ ಮಾತನಾಡಿ, ತಂದೆಯವರ ಜೊತೆಗೆ ಮತ ಚಲಾಯಿಸಿದ್ದಕ್ಕೆ ಖುಷಿಯಾಗಿದೆ. ಅವರು ಈ ಮುಂಚೆ ಶಾಸಕರಾಗಿ ಮಾಡಿದ ಕೆಲಸಗಳ ಕುರಿತು ಹೆಮ್ಮೆ ಇದೆ. ಲೋಕಸಭೆ ಕ್ಷೇತ್ರದ ಜನರು ಅವರ ಬಗ್ಗೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಸಂತಸವಾಗಿದೆ. ನಮ್ಮ ತಂದೆ ಗೆಲ್ಲುವುದು ಖಚಿತ ಎಂದರು.