ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ಯೋಜನೆಯ ಗೌರವ ವಿಜ್ಞಾನ ಸಂಪಾದಕ, ವಿಜ್ಞಾನ ಲೇಖಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಸಾತನೂರು ದೇವರಾಜು ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ – ವೀರ ಕನ್ನಡಿಗರ ಘರ್ಜನೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ ‘ಕುವೆಂಪು ಗೌರವ ಪುರಸ್ಕಾರ’ ದೊರೆತಿದೆ.
ಮೂರು ದಶಕಗಳಿಂದ ಬರೆವಣಿಗೆಯ ಕೃಷಿಯಲ್ಲಿ ತೊಡಗಿರುವ ಸಾತನೂರು ದೇವರಾಜ್ ಅವರ ಸೇವಾ ಸಾಧನೆಯನ್ನು ಪರಿಗಣಿಸಿ ಸಾಹಿತಿ ಟಿ. ಸತೀಶ್ ಜವರೇಗೌಡ ಅವರ ನೇತೃತ್ವದ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸೃಜನಶೀಲ ಸಾಹಿತ್ಯ ಪ್ರಕಾರದಲ್ಲಿ ಈವರೆಗೆ 59 ಪುಸ್ತಕಗಳನ್ನು ದೇವರಾಜ್ ರಚಿಸಿದ್ದಾರೆ. ಭಾವಬಂಧ, ನೆನಪುಗಳು ಸಾಯುವುದಿಲ್ಲ, ಚಿತ್ತ ವಿಹಾರ, ಓದು – ಒಂದು ಅನುಸಂಧಾನ, ಬರೆವಣಿಗೆ ಸ್ವ ಅನುಭವ, ಬೇವಿನ ಗಿಡ ಮತ್ತು ನಾನು, ಓದು ಬರೆವಣಿಗೆಯ ಶತ್ರುವೇ?, ಯುವ ಸಂಜೀವಿನಿ, ಚಿಂತನ ದೀಪ್ತಿ, ಅನುದಿನವೂ ವಿಜ್ಞಾನ, ಜೈವಿಕ ತಂತ್ರಜ್ಞಾನ, ಡಿಎನ್ಎ ಬೆರಳಚ್ಚು ತಂತ್ರಜ್ಞಾನ, ದೇಹ ಮಾಲಿನ್ಯ, ನ್ಯಾನೋ ತಂತ್ರಜ್ಞಾನ, ಜೀನ್ ವೃತ್ತಾಂತ, ಪ್ರಾಣಿಗಳಲ್ಲಿ ಸಹಬಾಳ್ವೆ, ಜೀವಜಗತ್ತಿನ ವಿಸ್ಮಯಗಳು ಇವರ ಪ್ರಸಿದ್ಧ ಕೃತಿಗಳು.
ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಜೀವ ವಿಜ್ಞಾನ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ ಸಾತನೂರು ದೇವರಾಜ್ ಅವರು ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲಿ ಕಾರ್ಯನಿರ್ವಹಿಸಿದ್ದಾರೆ. ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿಯೂ ಸಹ ತಮ್ಮ ಸೇವೆಯನ್ನು ಸಲ್ಲಿಸಿರುವುದು ಗಮನಾರ್ಹ.
ಸಾತನೂರು ದೇವರಾಜ್ ಅವರು ಸಾಹಿತ್ಯ, ಶಿಕ್ಷಣ ಮತ್ತು ಸಂಘಟನಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಮತ್ತು ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಕುವೆಂಪು ಗೌರವ ಪುರಸ್ಕಾರ ನೀಡಲಾಗುತ್ತಿದ್ದು, ಜ. 8ರಂದು ಬೆಳಗ್ಗೆ 10-30 ಕ್ಕೆ ಮಂಡ್ಯ ನಗರದ ಹರ್ಡೀಕರ್ ಭವನದಲ್ಲಿ ನಡೆಯಲಿರುವ ‘ವಿಶ್ವಮಾನವ ಕುವೆಂಪು ಹಬ್ಬ’ದಲ್ಲಿ ಖ್ಯಾತ ವಿದ್ವಾಂಸ ಡಾ. ಸಿಪಿಕೆ, ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಮೈಸೂರು ವಿವಿಯ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಷಹಸೀನಾ ಬೇಗಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ.ಸಿ. ನವೀನ್ ತಿಳಿಸಿದ್ದಾರೆ.