ಮೈಸೂರು: ಝಗಮಗಿಸುವ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ಕಿವಿಗಡಚಿಕ್ಕುವ ಯುವ ಘೋಷಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲೊಂದಾದ ಯುವ ಸಂಭ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.
ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದೀಪಬೆಳಗಿಸಿ, ಡೊಳ್ಳು ಬಾರಿಸಿ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ನಟ ಡಾಲಿ ಧನಂಜಯ್ ಕಾರ್ಯಕ್ರಮಕ್ಕೆ ತಂದರು.
ಇದೇ ವೇಳೆ ವೇದಿಕೆಯಲ್ಲಿ ಕಿವಿಗಡಚಿಕ್ಕುವ ಹಾಡುಗಳಿಗೆ ಯುವಕ ಯುವತಿಯರು ಹೆಜ್ಜೆ ಹಾಕಿದರೆ, ವೇದಿಕೆ ಮುಂಭಾಗ ಸೇರಿದ್ದ ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿ ಕುಣಿದು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಧನಂಜಯ್, ನನಗೆ ಮಾತು ಪ್ರೀತಿ ದೊಡ್ಡದು. ಮೈಸೂರು ಅಂದ್ರೆ ಮಾನಸಗಂಗೋತ್ರಿ ಬಯಲು ರಂಗಮಂದಿರ. ಇವುಗಳೊಂದಿಗೆ ನನಗೆ ಸಾಕಷ್ಟು ನೆನಪುಗಳಿವೆ. ಯುವ ದಸರಾಗೆ ಪ್ರತಿದಿನ ಬಂದು ಗಲಾಟೆ ಮಾಡುತ್ತಿದ್ದೆ. ಒಂದು ದಿನ ಸುಮ್ಮನೆ ಕುಳಿತಿಲ್ಲ. ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೆವು. ಸೆಲೆಬ್ರೆಷನ್ ಒಂದೇ ಜೀವನ. ನಿಮ್ಮ ಗುರಿ, ಕನಸು, ಹೊಸದು ಕಲಿತಾಗ ಹಬ್ಬ ಇನ್ನೂ ಕಳೆಗಟ್ಟುತ್ತದೆ. ಆದರೆ ಅಷ್ಟೇ ಚೆನ್ನಾಗಿ ಸಾಧನೆ ಮಾಡಬೇಕು. ಯಾವುದು ರಾತ್ರೋರಾತ್ರಿ ಆಗುವುದಿಲ್ಲ ಎಂದು ಹೇಳುವ ಮೂಲಕ ಯುವ ಮನಸ್ಸುಗಳಿಗೆ ಉತ್ಸಾಹ ತುಂಬಿದರು.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಭಾರತೀಯ ಕಲೆ ಮತ್ತು ದೇಶ ಭಕ್ತಿ, ಡಾ.ಎಂ.ದೇಜಮ್ಮ ಮಹಾವೀರ್ ಕಾಂಪೋಸಿಟ್ ಕಾಲೇಜು ತಂಡ ಮಹಿಳಾ ಸಬಲೀಕರಣ, ವಿದ್ಯಾವಿಕಾಸ್ ಇನ್ಸ್ಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆಂಡ್ ಕ್ಯಾಟರಿಂಗ್ ಟೆಕ್ನಾಲಜಿ ತಂಡ ಸ್ವತಂತ್ರ ಹೋರಾಟಗಾರರಾದ ಭಗತ್ ಸಿಂಗ್ ರಾಜಗುರು ಮತ್ತು ಸುಖದೇವ್ ಅವರ ಹೋರಾಟಗಾಥೆ, ಎನ್ಆರ್ ಮೊಹಲ್ಲಾದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಭಾರತೀಯ ಸಂಸ್ಕೃತಿ ಮತ್ತು ಪುರಾಣ, ರಾಮನಗರ ಜಿಲ್ಲೆ ಬಿಡದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ, ಶ್ರೀರಂಗಪಟ್ಟಣ ತಾಲೂಕಿನ ಮಹಾದೇವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಮತ್ತು ಹೆಗ್ಗಡದೇವನಕೋಟೆಯ ಸರ್ಕಾರಿ ಕನ್ನಡ ಮತ್ತು ಸಂಸ್ಕೃತಿ, ಜಾನಪದ ಕಲೆ, ದೇವರಾಜ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ದೇವರಾಜ ಮೊಹಲ್ಲಾ ತಂಡ ಮತ್ತು ಬೆಳವಾಡಿಯ ಕೈಗಾರಿಕ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ತಂಡ ರಾಷ್ಟ್ರೀಯ ಭಾವೈಕ್ಯತೆ, ಮಾರ್ವೆಲ್ ಪಿಯು ಕಾಲೇಜು ತಂಡ ಅಜಾದಿ ಕಾ ಅಮೃತ್ ಮಹೋತ್ಸವ, ಕೆ.ಆರ್.ನಗರದ ಬ್ರೈಟ್ ಪದವಿ ಪೂರ್ವ ಕಾಲೇಜು ಮಹಿಳಾ ಸಬಲೀಕರಣ, ಗುಂಡ್ಲಪೇಟೆಯ ಶ್ರೀದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ನವದುರ್ಗಿ ನೃತ್ಯ ವೈಭವ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗೌಡ, ಉಪಮೇಯರ್ ಜಿ.ರೂಪಾ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಆರ್.ರಘು ಕೌಟಿಲ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಇದ್ದರು.