ಮೈಸೂರು: ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯುವ ಗಜಪಯಣದ ಬಳಿಕ ಆನೆಗಳನ್ನು ಮೈಸೂರಿಗೆ ಲಾರಿಯಲ್ಲಿ ತರಲಾಗುತ್ತದೆ. ಆದರೆ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ಈ ಬಾರಿ ಆನೆಗಳನ್ನು ನಡೆಸಿಕೊಂಡೇ ಕರೆತರಬೇಕು ಎಂಬ ಒತ್ತಾಯ ಮಾಡಿದ್ದಾರೆ.
ದಸರಾ ಆಚರಣೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಎ.ಎಚ್.ವಿಶ್ವನಾಥ್ ಅವರು ದಸರಾದಲ್ಲಿ ಭಾಗವಹಿಸಲಿರುವ ಆನೆಗಳನ್ನು ವೀರನಹೊಸಳ್ಳಿಯಿಂದ ಮೈಸೂರಿಗೆ ನಡೆಸಿಕೊಂಡು ಕರೆತರುವಂತೆ ಸಲಹೆ ನೀಡಿದ್ದಾರೆ. ಈ ವಿಚಾರ ಕೆಲ ಕಾಲ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಈ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಯಣ ಕೇಂದ್ರ ಬಿಂದು. ನೀವು ಆನೆಗಳಿಗೆ ಪೂಜೆ ಮಾಡಿ ಅವುಗಳನ್ನು ಲಾರಿಗಳಲ್ಲಿ ಸಾಗಿಸುತ್ತೀರಿ. ಇದರಿಂದ ಗಜ ಪಯಣದ ಉದ್ದೇಶವೇ ಸಫಲವಾಗುವುದಿಲ್ಲ. ನಡೆಸಿಕೊಂಡು ಬರಲು ಇರುವ ಸಮಸ್ಯೆಯಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಡಾ.ವಿ.ಕರಿಕಾಳನ್, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆನೆಗಳನ್ನು ನಿತ್ಯ 15 ಕಿ.ಮೀ. ಮಾತ್ರವೇ ನಡೆಸಬೇಕು. ವೀರನಹೊಸಳ್ಳಿಯಿಂದ ಮೈಸೂರಿಗೆ 72ಕಿ.ಮೀ. ಆಗುತ್ತದೆ. ಆ.10ರಂದು ಅರಮನೆ ಬಳಿ ಆನೆಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಿಗದಿ ಆಗಿರುವುದರಿಂದ, ಆ ಸಮಯಕ್ಕೆ ತಲುಪಲು ಆನೆಗಳನ್ನು ನಿತ್ಯ 26 ಕಿ.ಮೀ ನಡೆಸಬೇಕಾಗುತ್ತದೆ ಎಂದು ಸಮಜಾಯಿಷಿ ನೀಡಿದರು.
ಡಿಸಿಎಫ್ ಮಾತಿಗೆ ಸಿಟ್ಟಾದ ವಿಶ್ವನಾಥ್, ಸಬೂಬು ಹೇಳುವುದು ಬೇಡ. ಅದನ್ನು ಕೇಳಲು ಯಾರೂ ಸಿದ್ಧವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಇಲ್ಲೇ ಇದ್ದಾರೆ. ಈಗಲೇ ಸಂಬಂಧಿಸಿದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಇಲ್ಲೇ ನಿರ್ಧರಿಸಿದರೆ ಉತ್ತಮ. ಇಲ್ಲದಿದ್ದರೆ ಗಜ ಪಯಣದ ವೇಳೆ ನಾನು ರಸ್ತೆಯಲ್ಲಿ ಮಲಗಿ ಪ್ರತಿರೋಧ ದಾಖಲಿಸುತ್ತೇನೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ತನ್ವೀರ್ ಸೇಠ್, ಈಗಾಗಲೇ ಗಜ ಪಯಣದ ಹಾಗೂ ಬರಮಾಡಿಕೊಳ್ಳುವ ದಿನಾಂಕ ತೀರ್ಮಾನವಾಗಿದೆ. ಆನೆಗಳನ್ನು ನಡೆಸಿಕೊಂಡು ಬರುವ ವಿಷಯವನ್ನು ಮುಂದಿನ ವರ್ಷಕ್ಕೆ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಇದನ್ನು ಒಪ್ಪದ ವಿಶ್ವನಾಥ್, ಆನೆಗಳನ್ನು ಸ್ವಾಗತಿಸುವುದನ್ನು ಎರಡು ದಿನ ಮುಂದೂಡಬಹುದು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಡಿಸಿಎಫ್ ಮೇಲೆ ಒತ್ತಡ ಹೇರಲಾಗದು.
ಅದರಿಂದ ಪ್ರಯೋಜನ ಆಗುವುದಿಲ್ಲ. ಅರಣ್ಯ ಸಚಿವರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಹಿರಿಯ ಅಧಿಕಾರಿಗಳು ಇಲ್ಲದೇ ಇಂತಹ ತೀರ್ಮಾನ ಮಾಡಲಾಗದು ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ.