ಚಾಮರಾಜನಗರ: ಮೂರು ದಶಕಗಳ ಮೂರು ರಾಜ್ಯಗಳಿಗೆ ಸಿಂಹ ಸ್ವಪ್ನದಂತೆ ಕಾಡಿದ್ದ ನರಹಂತಕನ ಹುಟ್ಟೂರಲ್ಲಿ ತಲೆ ಎತ್ತಿದೆ ನರಹಂತಕನಿಂದ ಹತ್ಯೆಯಾದ ಅರಣ್ಯಾಧಿಕಾರಿ ಶ್ರೀನಿವಾಸ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದೆ.
ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಿಂಹ ಸ್ವಪ್ನದಂತೆ ಮೂವತ್ತು ವರ್ಷಗಳ ಕಾಲ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಕಾಡಿದ್ದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಕಾವೇರಿ ನದಿ ಹರಿಯುವ ಒಡಲಿನಲ್ಲಿರುವ ನರಹಂತಕ ವೀರಪ್ಪನ್ ಹುಟ್ಟೂರು ಗೋಪಿನಾಥಂ ಶ್ರೀನಿವಾಸ್ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದೆ.
ಗೋಪಿನಾಥಂ ನಲ್ಲಿ ವಾಸ ಮಾಡುವವರು ನರಹಂತಕ ವೀರಪ್ಪನ್ ಗೆ ಸಂಬಂಧಿಗಳೇ ಹೆಚ್ಚಾಗಿದ್ದರೂ ಸಹ ವೀರಪ್ಪನ್ ವಂಚನೆಯಿಂದ ಹತ್ಯೆಗೀಡಾದ ಅರಣ್ಯ ಇಲಾಖೆಯ ಕೀರ್ತಿ ಚಕ್ರ ಪುರಸ್ಕೃತ ದಿವಂಗತ ಪಿ.ಶ್ರೀನಿವಾಸ್ ರವರೇ ಇಲ್ಲಿ ದೇವರಾಗಿದ್ದಾರೆ.
ಗೋಪಿನಾಥಂ ನಲ್ಲಿರುವ ಮಾರಿ ಗುಡಿಯಲ್ಲಿ ಪಿ.ಶ್ರೀನಿವಾಸ್ ರವರ ಭಾವಚಿತ್ರಕ್ಕೆ ನಿತ್ಯವೂ ಪೂಜಾ ಕೈಂಕರ್ಯಗಳು ನಡೆದ ಬಳಿಕವೇ ಇನ್ನಿತರ ಧಾರ್ಮಿಕ ಕೆಲಸ ಕಾರ್ಯಗಳು ನಡೆಯುತ್ತದೆ. ಇಲ್ಲಿಗೆ ಈ ಹಿಂದೆ ಚಾಮರಾಜನಗರ ವೃತ್ತದಲ್ಲಿ ಮುಖ್ಯ ಅರಣ್ಯಾಧಿಕಾರಿಯಾಗಿದ್ದ ಮನೋಜ್ ಕುಮಾರ್ ರವರು ಭೇಟಿ ನೀಡಿ ಗ್ರಾಮದ ಅಭಿವೃದ್ದಿಗೆ ಎರಡು ಲಕ್ಷರೂಪಾಯಿ ನೀಡಲು ಮುಂದಾದರು. ಆಗ ಅಧಿಕಾರಿಗಳು ನಿಡಿದ ಆರ್ಥಿಕ ನೆರವನ್ನು ಪಡೆಯದೆ ಗ್ರಾಮಸ್ಥರು ತಮಗೆ ವೀರಪ್ಪನ್ ನಿಂದ ಹತ್ಯೆಯಾದ ದಿವಂಗತ ಪಿ.ಶ್ರೀನಿವಾಸ್ ರವರ ಕಂಚಿನ ಪುತ್ತಳಿಯನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಗ್ರಾಮಸ್ಥರ ಮನವಿಯಂತೆ ಮನೋಜ್ ಕುಮಾರ್ ಅವರು ಶ್ರೀನಿವಾಸ್ ರವರ ಪುತ್ತಳಿಯನ್ನು ಸಿದ್ದಪಡಿಸಿದ್ದು ಅದೀಗ ಗ್ರಾಮದಲ್ಲಿ ಲೋಕಾರ್ಪಣೆಯಾಗಿದೆ.
ಗೋಪಿನಾಥಂ ಗ್ರಾಮದಲ್ಲಿ ಅರಣ್ಯ ಹುತಾತ್ಮರ ದಿನದಂದೇ ನರಹಂತಕ ವೀರಪ್ಪನ್ ನಿಂದ ಮೋಸದ ಬಲೆಗೆ ಬಿದ್ದು ಹತ್ಯೆಯಾದ ದಿವಂಗತ ಪಿ,ಶ್ರೀನಿವಾಸ್ ರವರ ಪುತ್ಥಳಿಯನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಗೋಗಿ ರವರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿದ್ದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ತಮ್ಮ ನೆಚ್ಚಿನ ಅಧಿಕಾರಿಯ ಪುತ್ತಳಿಯನ್ನು ಕಣ್ತುಂಬ ನೋಡಿ ಆನಂದ ಪಡುವ ಜನರು ಅಧಿಕಾರಿಯ ಸೇವೆಯ ಗುಣಗಾನ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯಾಧಿಕಾರಿ ವಿಜಯಕುಮಾರ್ ಗೋಗಿ, ಮುಖ್ಯ ಅರಣ್ಯಾಧಿಕಾರಿ ಮನೋಜ್ ಕುಮಾರ್, ದಿವಂಗತ ಶ್ರೀನಿವಾಸ್ ಸಹೋದರಿ ರಾಜಲಕ್ಷ್ಮಿ , ಸುದರ್ಶನ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗೋಪಿನಾಥಂ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
ಜನರ ನಡುವೆ ಉತ್ತಮ ಭಾಂದವ್ಯದಿಂದ ಜನಸೇವೆಗೆ ಮುಂದಾಗುವ ಅಧಿಕಾರಿಗಳಿಗೂ ಜನರು ದೈವಾಂಶರಂತೆ ಕಾಣುವುದು ಗಮನಾರ್ಹವಾಗಿದೆ. ನಿಜಕ್ಕೂ ನರಹಂತಕ ವೀರಪ್ಪನ್ ಹುಟ್ಟೂರಿನಲ್ಲಿ ಆತನಿಂದಲೇ ಹತ್ಯೆಯಾದ ಅರಣ್ಯಾಧಿಕಾರಿಯ ಪುತ್ತಳಿ ಪೂಜೆ ಕೈಂkರ್ಯಗಳು ನಡೆಯುತ್ತಿರುವುದು ಅಲ್ಲಿನ ಜನರ ಅಭಿಮಾನಕ್ಕೆ ಸಾಕ್ಷಿಯಾಗಿದೆ.