ಬೆಂಗಳೂರು: ಕರ್ನಾಟಕ ವಿಧಾನಸಭೆ ಮಳೆಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಂಡಿತು. ಉಭಯ ಸದನದಲ್ಲಿ ಇತ್ತೀಚೆಗೆ ನಿಧನರಾದ ಹಾಲಿ ಸಚಿವರಾಗಿದ್ದ ಉಮೇಶ ವಿಶ್ವನಾಥ ಕತ್ತಿ, ಮಾಜಿ ಸಚಿವರುಗಳಾಗಿದ್ದ ಎಂ. ರಘುಪತಿ, ಸಿ.ಯಾದವ್ ರಾವ್, ವಿಧಾನಸಭೆಯ ಮಾಜಿ ಸದಸ್ಯರುಗಳಾದ ಜಿ.ವಿ.ಶ್ರೀರಾಮರೆಡ್ಡಿ, ಕೆ.ಕೆಂಪೇಗೌಡ, ಸಿ.ಎಂ.ದೇಸಾಯಿ, ಎ.ಜಿ.ಕೊಡ್ಗಿ, ಖ್ಯಾತ ಸುಗಮ ಸಂಗೀತ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಹಾಗೂ ಬ್ರಿಟನ್ನ ಎಲಿಜಬೆಥ್ ರಾಣಿ ಅವರಿಗೆ ಸಂತಾಪ ಸೂಚಿಸಲಾಯಿತು.
ವಿಧಾನಸಭೆಯಲ್ಲಿ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಈ ವೇಳೆ ಸಭಾಧ್ಯಕ್ಷರು ಮಂಡಿಸಿದ ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಾಲಿ ಸಚಿವರಾಗಿದ್ದ ಉಮೇಶ ಕತ್ತಿ ಅವರು ಸಣ್ಣ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿ ವರ್ಣರಂಜಿತ ರಾಜಕಾರಣ ಮಾಡಿದ ಅವರು, ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಧಾನ ಪಾತ್ರ ವಹಿಸುವ ಜೊತೆಗೆ ಸಾರ್ವಜನಿಕ ಕ್ಷೇತ್ರದಲ್ಲೂ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದರು.
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ನಂತರ ಪಡಿತರ ವ್ಯವಸ್ಥೆಯಲ್ಲಿ ರಾಗಿ, ಜೋಳವನ್ನು ಸೇರಿಸಬೇಕೆಂಬ ಪ್ರಸ್ತಾಪವನ್ನು ಇಟ್ಟರು. ಹುಕ್ಕೇರಿಯಲ್ಲಿ ವಿದ್ಯತ್ ವಿತರಣಾ ಘಟಕವನ್ನು ಪ್ರಾರಂಭಿಸಿದ್ದರು. ಮಹಾರಾಷ್ಟ್ರ ಮತ್ತು ಗುಜರಾತ್ ಹೊರತುಪಡಿಸಿದರೆ ಇದನ್ನು ಮೊದಲು ಪ್ರಾರಂಭಿಸಿದ ಕತ್ತಿ ಅವರು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ವಿವಿಧ ರಾಜಕೀಯ ಪಕ್ಷಗಳನ್ನು ಬದಲಾಯಿಸಿದರು ಮತ ಪಡೆದು, ಜನರ ಮಧ್ಯೆ ಇದ್ದು ಬೆಳೆದಂತ ರಾಜಕಾರಣಿ ಉಮೇಶ್ ಕತ್ತಿ ಅವರು, ಶ್ರೀಮಂತಿಕೆ ಇದ್ದರು ಜನರ ನಂಟನ್ನು ಬಿಡದೆ ಆತ್ಮೀಯರಾಗಿದ್ದರು. ಯಾವುದೇ ವಿಚಾರ ತೆಗೆದುಕೊಂಡರೆ ಸಾಧನೆ ಮಾಡದೇ ಬಿಡುತ್ತಿರಲಿಲ್ಲ. ಕ್ಷೇತ್ರದ ಜನತೆಗೆ ಪ್ರೀತಿ ಪಾತ್ರರಾಗಿದ್ದ ಅವರು ಹಾಸ್ಯದಿಂಧ ಸ್ನೇಹ ಸಂಪಾದನೆ ಮಾಡಿದ್ದರು.
ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಬೇಕು ಎಂಬ ಬಗ್ಗೆ ಕಳಕಳಿ ಹೊಂದಿದ್ದರು. ಇಡಕಲ್ ಡ್ಯಾಂ ನ್ನು ಉದ್ಯಾನವನ ಹಾಗೂ ಪ್ರವಾಸೋದ್ಯಮ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರು. ಕ್ಯಾಬಿನೆಟ್ನಲ್ಲಿ ಒಪ್ಪಿಗೆ ನೀಡಿ, ಅವರ ಸವಿನೆನಪಿನಲ್ಲಿ ಪೂರ್ಣಗೊಳಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಅಗಲಿದ ಗಣ್ಯರುಗಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರುಗಳ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಹಾಗೂ ಸಂಸದೀಯ ಸಚಿವರಾದ ಮಾಧುಸ್ವಾಮಿ, ಮಾಜಿ ಸಚಿವರಾದ ಸಿ.ಟಿ.ರವಿ, ಮುಜರಾಯಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಸದಸ್ಯರುಗಳಾದ ಹೆಚ್.ಕೆ. ಕುಮಾರಸ್ವಾಮಿ, ರಮೇಶ್ ಕುಮಾರ್, ಯು.ಟಿ. ಖಾದರ್, ದೇಶಪಾಂಡೆ ಅವರುಗಳು ಅಗಲಿದ ಗಣ್ಯರುಗಳ ಬಗ್ಗೆ ಧ್ವನಿಗೂಡಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರುಗಳ ಕುಟುಂಬ ವರ್ಗಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದರು.
ಇದೇ ವೇಳೆ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.
ವಿಧಾನ ಪರಿಷತ್ತಿನಲ್ಲಿಯೂ ಸಂತಾಪ
ಕರ್ನಾಟಕ ವಿಧಾನ ಪರಿಷತ್ತಿನ ನೂರ ನಲವತ್ತೇಳನೆಯ ಅಧಿವೇಶನವು ಸೋಮವಾರ ವಿಧಾನ ಪರಿಷತ್ತಿನ ಸಭಾಪತಿಗಳಾದ ರಘುನಾಥ ರಾವ ಮಲ್ಕಾಪೂರೆ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು.
ಅಧಿವೇಶನದ ವೇಳೆ ಸಭಾಪತಿಗಳು, ವಿಧಾನ ಸಭೆಯ ಶಾಸಕರು ಹಾಗೂ ಹಾಲಿ ಸಚಿವರಾದ ಉಮೇಶ್ ವಿ. ಕತ್ತಿ, ವಿಧಾನ ಸಭೆಯ ಹಾಗೂ ವಿಧಾನ ಪರಿಷತ್ತಿನ ಮಾಜಿ ಶಾಸಕರು ಹಾಗೂ ಸಚಿವರಾದ ಎಂ. ರಘುಪತಿ, ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಎಂ.ಡಿ. ರಮೇಶ್ ರಾಜು, ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ. ಕೋಡಿ ಕುಶಾಲಪ್ಪಗೌಡ, ಹಿರಿಯ ವೈದ್ಯರಾದ ಡಾ: ಗುರುರಾಜ ಹೆಬ್ಬಾರ ಹಾಗೂ ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರುಗಳು ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಿ ಸಂತಾಪ ಸೂಚಿಸಿದರು.