ಚಾಮರಾಜನಗರ: ಭಾರತೀಯರ ಹೆಮ್ಮೆಯ ಸಂಕೇತ ನಮ್ಮ ರಾಷ್ಟ್ರಧ್ವಜ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಹೇಳಿದರು.
ಅವರು ಭಾರತ ಸೇವಾದಳದ ಕಚೇರಿಯಲ್ಲಿ ನಡೆದ ಭಾರತದ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜ ಮಹತ್ವ ಕುರಿತು ಮಾತನಾಡಿ, ಭಾರತದ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಜುಲೈ 22, 1947ರ ಕಾನ್ಸ್ಟಿಟ್ಯೂಯೆಂಟ್ ಅಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ದಿನವನ್ನು ರಾಷ್ಟ್ರಧ್ವಜ ಅಂಗೀಕಾರ ದಿನ ಎಂದು ಕರೆಯಲಾಗುತ್ತಿದೆ. ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ. ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ದ್ಯೆಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ ಎಂದು ತಿಳಿಸಿದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಮಾತನಾಡಿ, ಕೇಸರಿ ಬಣ್ಣವು ಧೈರ್ಯ ಬಿಳಿ ಬಣ್ಣವು ಶಾಂತಿ ಮತ್ತು ಹಸಿರು ಬಣ್ಣವು ಪ್ರಕೃತಿಯೊಡನೆ ಭೂಮಿಯ ಫಲವತ್ತತೆಯನ್ನು, ಅಶೋಕ ಚಕ್ರವು ದೇಶದ ಪ್ರಗತಿಶೀಲತೆಯನ್ನು ವಿವರಿಸುತ್ತದೆ. ದೇಶದ ವಿಭಿನ್ನ ಜಾತಿ,ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ, ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ. ಸ್ವತಂತ್ರ ಭಾರತದ ಧ್ವಜದ ಕನಸು ಕಂಡ ಎಲ್ಲರ ಪ್ರಯತ್ನದ ಮತ್ತು ಶೌರ್ಯದ ಸ್ಮರಣೆ ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ಹೇಳಿದರು.
ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುಗಂಧರಾಜ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ವಿ. ಮಹದೇವಯ್ಯ , ಕೋಶಾಧ್ಯಕ್ಷ ವಿ ಶ್ರೀನಿವಾಸ ಪ್ರಸಾದ್ ತಾಲೂಕು ಕಾರ್ಯದರ್ಶಿ ನಾಗರಾಜ, ಜಿಲ್ಲಾ ಸಂಘಟಕ ಈರಯ್ಯ, ಸುರೇಶ್ ಗೌಡ ಮತ್ತಿತರರು ಭಾಗವಹಿಸಿದ್ದರು. ಆರಂಭದಲ್ಲಿ ಭಾರತ ಸೇವಾದಳದ ಪ್ರಾರ್ಥನೆ ಮತ್ತು ಕಾರ್ಯ ಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು.