ಚಾಮರಾಜನಗರ: ಚಾಮರಾಜನಗರ ವ್ಯಾಪ್ತಿಯಲ್ಲಿ ಹುಲಿ ಉಗುರು, ಚಿರತೆ ಹಲ್ಲು ಹೀಗೆ ಮೇಲಿಂದ ಮೇಲೆ ಪ್ರಕರಣಗಳು ಪತ್ತೆಯಾಗುತ್ತಿರುವುದು ಅಚ್ಚರಿ ತಂದಿದೆ. ಇದರ ಹಿಂದೆ ಭಾರೀ ದೊಡ್ಡ ಜಾಲ ಇದೆಯಾ ಎಂಬ ಸಂಶಯಗಳು ಮೂಡಲಾರಂಭಿಸಿದೆ.
ಇತ್ತೀಚೆಗೆಯಷ್ಟೇ ಹುಲಿ ಉಗುರು ಮಾರುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಚಿರತೆ ಉಗುರು, ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ. ಬಂಧಿತರಿಂದ 18 ಚಿರತೆ ಉಗುರು, 8 ಹಲ್ಲುಗಳನ್ನು ವಶಡಿಸಿಕೊಳ್ಳಲಾಗಿದೆ.
ಅರಣ್ಯ ಸಂಚಾರಿ ದಳಕ್ಕೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ದಾಳಿ ನಡೆಸಿದ ವೇಳೆ ತಮಿಳುನಾಡು ಮೂಲದ ಜವರಯ್ಯ(52), ಕೆಂಪ(55), ತಮ್ಮಯ್ಯ(45) ಎಂಬುವರು ಸಿಕ್ಕಿ ಬಿದ್ದಿದ್ದು ಮಾಲು ಸಹಿತ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಭಾಗಿಯಾಗಿದ್ದು ಆತ ತಲೆ ಮರೆಸಿಕೊಂಡಿದ್ದಾನೆ,
ಚಿರತೆ ಉಗುರುಗಳಿಗೆ ಕಾಳಸಂತೆಯಲ್ಲಿ ಭಾರೀ ಬೇಡಿಕೆ ಇದೆ ಎಂಬ ತಪ್ಪು ತಿಳುವಳಿಕೆ ಹಾಗೂ ಹಲ್ಲು, ಉಗುರುಗಳಿಂದ ತಾಯತ ಮಾಡಿಕೊಂಡರೇ ಒಳಿತಾಗಲಿದೆ ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.