ಚಾಮರಾಜನಗರ: ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿಯ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಂದೆ ಸ್ವಾಮಿ ದೇವಸ್ಥಾನದಲ್ಲಿ ಕೊಂಡೋತ್ಸವ ಭಕ್ತಿಭಾವದಿಂದ ಜರುಗಿತು.
ಈ ವೇಳೆ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಯಿತು. ಮುಂಜಾನೆ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡದಲ್ಲಿ ಅರ್ಚಕರು ಹಾಗೂ ಭಕ್ತರು ಕೊಂಡಕ್ಕೆ ಇಳಿದು ಭಕ್ತಿ ಮೆರೆದರು.
ಕಳೆದ ಎರಡು ವರ್ಷಗಳಿಂದ ಯಾವುದೇ ಹಬ್ಬಗಳು ನಡೆಯದ ಕಾರಣ ಈ ಬಾರಿ ಕೊರೊನಾ ದೂರವಾಗಿದ್ದು, ಜನ ಕೊಂಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇನ್ನು ಡಾ.ರಾಜ್ ಕುಮಾರ್ ಹುಟ್ಟೂರು ದೊಡ್ಡಗಾಜನೂರು ಗ್ರಾಮದಲ್ಲಿಯೂ ಸುಪ್ರಸಿದ್ಧ ಶ್ರೀ ಮಂಠೇಸ್ವಾಮಿಯ ಕೊಂಡೋತ್ಸವ ಜರುಗಿತು. ಮಂಟೇ ಸ್ವಾಮಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಮಂಟೇಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡೋತ್ಸವದಲ್ಲಿ ಅರ್ಚಕರು ಪಾಲ್ಗೊಂಡರು. ಸುತ್ತಮುತ್ತಲಿನ ಜನ ಕೊಂಡೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸಿದರು.