ಚಾಮರಾಜನಗರ: ಕೊರೊನಾ ಹಿನ್ನಲೆಯಲ್ಲಿ ತಾಲೂಕಿನ ಆಲೂರು ಗ್ರಾಮದಲ್ಲಿ ಶ್ರೀ ಮಂಟೇಲಿಂಗೇಶ್ವರ ಸ್ವಾಮಿಯ ಉತ್ಸವವು ಈ ಬಾರಿ ಸರಳವಾಗಿ ನಡೆಯಿತು.ಇದೇ ವೇಳೆ ನೀಲಗಾರರ ಭಕ್ತರಿಂದ ಮಂಟೇಸ್ವಾಮಿ ಕಂಡಾಯ ಮೆರವಣೆಗೆ ನಡೆಯಿತು.
ಗ್ರಾಮದ ಆರ್ಕೇಶ್ವರ ದೇವಾಲಯದಲ್ಲಿ ದೇವರ ಐದು ಕಂಡಾಯಗಳಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಭಕ್ತರು ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಬಳಿಕ ಮೆರವಣಿಗೆ ಬಸವ ಭವನಕ್ಕೆ ತಲುಪಿತು.
ಮೆರವಣಿಗೆ ತೆರಳಿದ ಸಂದರ್ಭದಲ್ಲಿ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಭಕ್ತಿಯಿಂದ ಪೂಜಾ ಕೈಂಕರ್ಯ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನೋಯೋಗ ಮಾಡಲಾಯಿತು.ಈ ಸಂದರ್ಭದಲ್ಲಿ ನೀಲಗಾರರು. ವೀರಶೈವ ಸಮಾಜದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.
ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಕಂಡಾಯ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿತ್ತು. ಗ್ರಾಮದ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಜನ ಸೇರುವುದರೊಂದಿಗೆ ವಿವಿಧ ಸೇವೆಗಳು ನಡೆಯುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸರಳವಾಗಿ ನಡೆಸುತ್ತಾ ಬರಲಾಗುತ್ತಿದೆ.