ಬಂಟ್ವಾಳ : ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಯೋಧರ ನಿಜವಾದ ಕನಸು ಮೋದಿ ಆಡಳಿತದಲ್ಲಿ ನನಸಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಬಂಟ್ವಾಳ ತಾಲೂಕಿನ ಸಜೀಪಮೂಡಗ್ರಾಮದ ಶ್ರೀಕ್ಷೇತ್ರ ಮಿತ್ತಮಜಲಿಗೆ 2.50 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆಯ ಲೋಕಾರ್ಪಣೆಯ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘಟನೆ, ಅಭಿವೃದ್ಧಿಯ ವಿಚಾರಧಾರೆಯ ಜೊತೆಗೆ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ , ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರು, ರಾಜ್ಯದ 224 ಕ್ಷೇತ್ರಗಳ ಬೂತ್ ಮಟ್ಟದಲ್ಲೂ ಸಂಚಲನ ತಂದಿದ್ದಾರೆ, ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಬಿಜೆಪಿ ಬಹುಮತ ದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದವರು ಭವಿಷ್ಯ ನುಡಿದರು.
ಬಿಜೆಪಿಯನ್ನು ಅಧಿಕಾರಕ್ಕೆ ತರಲು ಡಿಕೆಶಿ, ಸಿದ್ಧು ಶಪಥ..!
ಇತ್ತೀಚೆಗಿನ ಚುನಾವಣೆಗಳಲ್ಲಿ ಬಿಜೆಪಿ ಪರವಾದ ಫಲಿತಾಂಶಗಳೇ ಬಂದಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಡಿಕೆಶಿ, ಸಿದ್ದರಾಮಯ್ಯ ಶಪಥ ಮಾಡಿದ್ದಾರೆ, ಅವರಿಬ್ಬರ ಇತ್ತೀಚೆಗಿನ ನಡವಳಿಕೆಗಳು, ಹೇಳಿಕೆಗಳು ಇದನ್ನುಸ್ಪಷ್ಟ ಪಡಿಸಿದೆ ಎಂದು ಅವರು ವ್ಯಂಗ್ಯವಾಡಿದರು.
ಗೋಮಾತೆಯ ಶಾಪದಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು, ಕಾಂಗ್ರೇಸ್ ಪಕ್ಷ ನಿರ್ನಾಮವಾಗಿದೆ ಎಂದ ಅವರು ನಾವು ಯಾವುದೇ ಮುಸಲ್ಮಾನರ ವಿರೋಧಿ ಅಲ್ಲ, ಆದರೆ ನಾವು ರಾಷ್ಟ್ರ ವಿರೋಧಿ ಮುಸಲ್ಮಾನರ ವಿರೋಧಿಗಳು ಹಿಂದುಗಳು ಯಾರ ಸುದ್ದಿಗೂ ಹೋಗಲ್ಲ, ನಮ್ಮ ಸುದ್ದಿಗೆ ಯಾರಾದ್ರೂ ಬಂದ್ರೆ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದರು.
ದಕ್ಷಿಣ ಕನ್ನಡ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುವ ಮಣ್ಣು, ಆದರೂ ಇಲ್ಲಿ 23 ಜನ ಧರ್ಮರಕ್ಷಕರ ಕೊಲೆಯಾಗಿತ್ತು, ಆದರೆ ಕಳೆದ ನಾಲ್ಕು ವರ್ಷಗಳಿಂದ ಬಂಟ್ವಾಳ ಶಾಂತವಾಗಿದ್ದು ರಾಜೇಶ್ ನಾಯ್ಕ್ ಎಲ್ಲರಿಗೂ ಮಾದರಿ ಎಂದರು.
ಅಭಿವೃದ್ಧಿ ಕೆಲಸ ತೃಪ್ತಿ: ನಾಯ್ಕ್
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನತೆ ಇರಿಸಿದ್ದ ವಿಶ್ವಾಸಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದ್ದು, ಇದು ನನ್ನ ಜವಬ್ದಾರಿ, ಮುಂದೆಯೂ ಕ್ಷೇತ್ರದ ಜನತೆಯೊಂದಿಗೆ ಇದ್ದು ಕೆಲಸ ನಿರ್ವಹಿಸುವುದಾಗಿ ತಿಳಿಸಿದರು. ಕಳೆದ 4 ವರ್ಷದಲ್ಲಿ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಿರುವ ಸಂತೃಪ್ತಿ ಹೊಂದಿದ್ದು,ಇದೇ ಮಾದರಿಯಲ್ಲಿ ಪಾಣೆಮಂಗಳುಇರಿನಿಂದ ನಂದಾವರ ಕೇತ್ರಕ್ಕೆ 10 ಕೋ.ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶೀಘ್ರವೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದ ಶಾಸಕ ರಾಜೇಶ್ ನಾಯ್ಕ್ ಜನರು ಕೂಡ ಸಹಕರಿಸಿದಾಗ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೂ ಇದೇ ಮಾದರಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು ಸಾಧ್ಯವಾಗುವುದು ಎಂದರ.
4 ವರ್ಷದಲ್ಲಿ ಅಭಿವೃದ್ಧಿ : ನಳಿನ್
ರಾಜ್ಯ ಬಿಜೆಪಿ ಅಧ್ಯಕ್ಷ , ಸಂಸದ ನಳಿನ್ಕುಮಾರ್ ಕಟೀಲ ಮಾತನಾಡಿ, ರಾಜೇಶ್ ನಾಯ್ಕ್ ಅವರ ಇಚ್ಛಾಶಕ್ತಿಯ ಕಾರ್ಯವೈಖರಿಯಿಂದ ಕಳೆದ ನಲುವತ್ತು ವರ್ಷಗಳಲ್ಲಿ ಬಂಟ್ವಾಳದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಕಳೆದ ನಾಲ್ಕು ವರ್ಷಗಳಲ್ಲಿ ಆಗಿದೆ ಎಂದರು.
ಬಂಟ್ವಾಳಕ್ಕೆ ನಾರಾಯಣ ಗುರು ವಸತಿಶಾಲೆ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಮಾತನಾಡಿ, ಒಂದು ಕಾಲದಲ್ಲಿ ರಾವಣ ರಾಜ್ಯವಾಗಿದ್ದ ಬಂಟ್ವಾಳ, ರಾಜೇಶ್ ನಾಯ್ಕ್ ಅವರ ಶಾಸಕವಧಿಯಲ್ಲಿ ವಿಭೀಷಣ ರಾಜ್ಯವಾಗಿ ಪರಿವರ್ತನೆಯಾಗಿದೆ ಎಂದರು. ಮುಖ್ಯಮಂತ್ರಿಯವರು ಬಜೆಟ್ ನಲ್ಲಿ ಘೋಷಿಸಿದ 29 ಕೋಟಿ ರೂ ವೆಚ್ಚದ ನಾರಾಯಣ ಗುರು ವಸತಿಶಾಲೆಯನ್ನು ದ.ಕ.ಜಿಲ್ಲೆಯಲ್ಲಿ ಬಂಟ್ವಾಳಕ್ಕೆ ಒದಗಿಸುವುದಾಗಿ ಅವರು ಪ್ರಕಟಿಸಿದರು.
ಸಜಿಪ ಮೂಡ ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ,ಕ್ಷೇತ್ರ ಬಿಜೆಪಿ ಮಂಡಲಅಧ್ಯಕ್ಷ ದೇವಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಭ್ರಮಾಚರಣೆಯ ರೂವಾರಿ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿದರು. ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ನಾಲ್ಕು ವರ್ಷದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವ ಸಮಗ್ರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಪ್ರಧಾನಕಾರ್ಯದರ್ಶಿ ಡೊಂಬಯ್ಯ ಅರಳ ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕು ಮೊದಲು ಪುತ್ತೂರಿನ ಗಾಯಕ ಜಗದೀಶ್ ಆಚಾರ್ಯ ಮತ್ತವರ ಬಳಗದಿಂದ ಭಕ್ತಿಗೀತೆ ಕಾರ್ಯಕ್ರಮ ಹಾಗೂ ಮಿತ್ತಮಜಲು ದ್ವಾರದಿಂದ ಕ್ಷೇತ್ರದ ವರೆಗೆ ಮೆರವಣಿಗೆ ನಡೆಯಿತು.ಸಂಭ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.