ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ ಉಪಾಧ್ಯಕ್ಷೆ ಕವಿತಾ ವಿರುದ್ಧ 21 ನಗರಸಭಾ ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಜಯ ಸಿಕ್ಕಿದ್ದು ಉಪಾಧ್ಯಕ್ಷೆ ಸ್ಥಾನದಿಂದ ಕವಿತಾ ರವರು ಪದಚ್ಯುತಿಗೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯಲ್ಲಿ ಕಳೆದ ತಿಂಗಳಷ್ಟೇ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಹಾಗೂ ಪಕ್ಷೇತರರು ಸೇರಿ ಒಟ್ಟು 21 ಸದಸ್ಯರು ನಗರಸಭೆ ಉಪಾಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ಕರೆಯುವಂತೆ ಉಪವಿಭಾಗಾಧಿಕಾರಿ ಹಾಗೂ ಪೌರಾಯುಕ್ತರಿಗೆ ಮನವಿ ಪತ್ರವನ್ನ ಸಲ್ಲಿಸಿದ್ದರು. ಇದಾದ ಬಳಿಕ ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದ ಬಿಜೆಪಿ ನಗರ ಸಭಾ ಸದಸ್ಯರು ತಮ್ಮ ಮನವಿಯನ್ನ ವಾಪಸ್ ಪಡೆದಿದ್ದರು. ಇನ್ನು ಉಳಿದವರ ಮನವಿಯ ಹಿನ್ನಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ನಿಗದಿ ಪಡಿಸಲಾಗಿತ್ತು. ಅದರಂತೆ ಪೌರಾಯುಕ್ತ ವಿಜಯ್ ಅವರು ಸಭೆ ಕರೆದಿದ್ದರು.
ಕೊಳ್ಳೇಗಾಲ ನಗರಸಭೆಯ ಒಟ್ಟು 31 ಸದಸ್ಯರಲ್ಲಿ 7 ಮಂದಿ ಸದಸ್ಯರನ್ನು ಜಿಲ್ಲಾಧಿಕಾರಿಗಳು ವಿಪ್ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಅನರ್ಹ ಹೊರತುಪಡಿಸಿ, ಉಳಿದ 24 ಮಂದಿ ನಗರಭಾ ಸದಸ್ಯರು ಸಂಸದರು ಹಾಗೂ ಶಾಸಕ ಸೇರಿ ಒಟ್ಟು 26 ಸಂಖ್ಯಾಬಲ ಇದೆ. ಆ ಪೈಕಿ ಅವಿಶ್ವಾಸದ ವಿರುದ್ಧ ಉಪಾಧ್ಯಕ್ಷೆ ಕವಿತಾ ಅವರಿಗೆ ಮೂರನೇ ಒಂದರಷ್ಟು ಸದಸ್ಯ ಬಲದ ಅಗತ್ಯವಿತ್ತು. ಅಂದರೆ ಒಂಬತ್ತು ಸದಸ್ಯರು ಮತ ಚಲಾಯಿಸಬೇಕಿತ್ತು. ಆದ್ರೆ ಕವಿತಾ ಪರ ಕೇವಲ ಐದು ಮತಗಳು ಚಲಾವಣೆಯಾಗಿದ್ದು ಈ ಮೂಲಕ ಅವಿಶ್ವಾಸ ಮಂಡಿಸಿದ ಸದಸ್ಯರಿಗೆ ಜಯವಾಗಿದೆ.
ಬಿಜೆಪಿಯ ಏಳು ಸದಸ್ಯರಲ್ಲಿ ಜಿ.ಪಿ.ಶಿವಕುಮಾರ್ ಹಾಗೂ ರಮ್ಯ ರವರುಗಳು ಸಭೆಯಲ್ಲಿ ಗೈರಾಜರಾಗುವ ಮೂಲಕ ಬಿಜೆಪಿ ಉಪಾಧ್ಯಕ್ಷೆ ಅವಿಶ್ವಾಸಕ್ಕೆ ಪರೋಕ್ಷವಾಗಿ ಸಹಕರಿಸಿದರು. ಇದರ ಜೊತೆಗೆ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಎನ್. ಮಹೇಶ್ ರವರು ಸಹ ಗೈರಾಗಿದ್ದರು.
ಇದಲ್ಲದೇ ಹಿಂದೆ ಶಾಸಕ ಎನ್.ಮಹೇಶ್ ಬೆಂಬಲಿಗರು ಮತ್ತು ಬಿಜೆಪಿ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದ ಪಕ್ಷೇತರ ಸದಸ್ಯ ಶಂಕರನಾರಾಯಣಗುಪ್ತ ಅವರು ಸಹ ಇಂದು ಕಾಂಗ್ರೆಸ್ ಸದಸ್ಯರ ಜತೆಯಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಪುಷ್ಠಿ ನೀಡಿದೆ. ಇದರೊಂದಿಗೆ ಕಾಂಗ್ರೆಸ್, ಬಿಎಸ್ಪಿ ಮತ್ತು ಪಕ್ಷೇತರ ಸದಸ್ಯರ ದೋಸ್ತಿ ಮುಂದುವರೆದಿದ್ದು ಮುಂದೆ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿದ್ದಾರೆ.