ಮೈಸೂರು: ಕೊಡಗಿನ ಸ್ವಾತಂತ್ರ್ಯ ಸೇನಾನಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಹುತಾತ್ಮ ದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಅರ್ಪಿಸುವ ಮುಖೇನ ಆಚರಿಸಲಾಯಿತು.
ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸ್ವಾತಂತ್ರ ಹೋರಾಟಗಾರ ಹುತಾತ್ಮ ಸುಬೆದಾರ್ ಗುಡ್ಡೆ ಮನೆ ಅಪ್ಪಯ್ಯಗೌಡರ ಹುತಾತ್ಮ ದಿನವನ್ನು ಸಂಸ್ಕರಣ ದಿನವನ್ನಾಗಿ ಆಚರಿಸಲಾಯಿತು.
ಹಿರಿಯ ಸಾಹಿತಿ ಡಾ ಸಿ ಪಿ ಕೃಷ್ಣಕುಮಾರ್ ಅವರು ಕಾರ್ಯಕ್ರಮಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು 1857 ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ವರ್ಷ. ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾ ಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು ‘ಧಂಗೆ’ ಎಂದರು. ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್ ಪಾಂಡೆ,ತಾಂತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ ‘ಸಿಪಾಯಿ ಧಂಗೆ’ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅನ್ನುವುದಕ್ಕೂ ಮೊದಲು ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು.
ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ ಇವರು ಕಾಣದಾಗುವುದು ನಮ್ಮ ದುರ್ದೈವ. ಇಂದು ಅಕ್ಟೋಬರ್ 31 ಕೊಡಗಿನ ನಾಯಕ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನ ಗಲ್ಲಿಗೇರಿಸಿದ ದಿನವನ್ನು ಹುತಾತ್ಮರ ದಿನವೆಂದು ಸರ್ಕಾರ ಆಚರಿಸಲಿ ಸ್ವಾತಂತ್ರ್ಯ ಕೇವಲ ಸಂಗತಿಯಲ್ಲ. ಅದರ ಹಿಂದೆ ಹಲವರ ಬಲಿದಾನವಿದೆ ಎಂಬುದನ್ನು ನಮ್ಮ ಯುವ ಪೀಳಿಗೆ ಅರಿಯಲೇ ಬೇಕಾದ ಪರಮ ಸತ್ಯವೆಂದರೆ ನಮ್ಮವರೇ ಎಂದು ಪರಿಭಾವಿಸುವ ನಮ್ಮವರು ಹಲವು ಕಡೆ ನಮ್ಮವರಿಗೆ ಬೆನ್ನಿಗೆ ಚೂರಿ ಹಾಕಿದ್ದು ಎಂದರು.