ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಸಮೀಪದಲ್ಲಿ ಪುರಾತನಕಾಲದ ಸುರಂಗವು ಪತ್ತೆಯಾಗಿದೆ.
ಬೆಟ್ಟದಪುರದಿಂದ ಕುಶಾಲನಗರ ಮಾರ್ಗದಲ್ಲಿ ತಾವರೆಕೆರೆಯ ಸಮೀಪ ಪುರಾತನ ಕಾಲದ 20 ಅಡಿಗೂ ಆಳದ ಸುರಂಗ ಪತ್ತೆಯಾಗಿದ್ದು, ಜೆಸಿಬಿಯ ಮೂಲಕ ದೂರವಾಣಿ ಸಂಪರ್ಕದ ದುರಸ್ತಿ ಕಾರ್ಯದಲ್ಲಿರುವಾಗ ಚಾಲಕ ಈ ವಿಚಾರವನ್ನು ಸ್ಥಳಿಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಸೋಮವಾರ ಬೆಟ್ಟದಪುರ ಮತ್ತು ಕುಶಾಲನಗರ ರಸ್ತೆಯಲ್ಲಿ ದೂರವಾಣಿ ಸಂಪರ್ಕದ ಕೆಬಲ್ ಕೆಲಸಕ್ಕಾಗಿ ಜೆಸಿಬಿ ಮೂಲಕ ಕೆಲಸ ಪ್ರಾರಂಭಿಸಲಾಯಿತು, ನಂತರ ತಾವರೆಕೆರೆಯ ಸಮೀಪದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಮಂಜುನಾಥರವರಿಗೆ ಸೇರಿದ ಜಮೀನಿನ ಪಕ್ಕ ಸುಮಾರು ನಲವತ್ತು ಅಡಿ ಆಳದ ಸುರಂಗ ಮಾರ್ಗ ಪತ್ತೆಯಾಯಿತು.
ವಿಷಯ ತಿಳಿದ ತಾಲೂಕು ಕಚೆೇರಿ ಶಿರಸ್ತೇದಾರ್ ಪ್ರಕಾಶ್ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಪ್ರದೀಪ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ನಂತರ ಇದು ಪುರಾತತ್ವ ಇಲಾಖೆಗೆ ಬರುವುದರಿಂದ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪುರಾತತ್ವ ಇಲಾಖೆಯ ಉಪನಿರ್ದೇಶಕ ಗವಿಸಿದ್ದಯ್ಯ ಮತ್ತು ಎನ್.ಎಲ್.ಗೌಡ ಅವರು ಪರಿಶೀಲನೆ ನಡೆಸಿ ಇಲ್ಲಿ ಯಾವುದೇ ಇತಿಹಾಸದ ಕುರುಹುಗಳು ಇಲ್ಲವಾಗಿದ್ದು, ಆದ್ದರಿಂದ ಇದು ಸುರಂಗ ಮಾರ್ಗವಲ್ಲ ಎಂದು ಸ್ಪಷ್ಟಪಡಿಸಿ ಆ ಗುಂಡಿಯನ್ನು ಮುಚ್ಚಿ ಹಾಕಲಾಯಿತು.