ಮೈಸೂರು: ಜಗತ್ತಿನ ಆಗುಹೋಗುಗಳ ಕ್ಷಣಕ್ಷಣದ ಮಾಹಿತಿಗಳು ಇಂದು ತಂತ್ರಜ್ಞಾನದಿಂದ ಲಭ್ಯವಾಗುತ್ತಿದ್ದು ತಂತ್ರಜ್ಞಾನವನ್ನು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಹೆಚ್.ವಿ.ರಾಜೀವ್ ತಿಳಿಸಿದರು.
ಭಾನುವಾರ ಕುವೆಂಪುನಗರದಲ್ಲಿರುವ ಪ್ರಮತಿ ಹಿಲ್ವ್ಯೂ ಶಾಲೆಯಲ್ಲಿ ಆಯೋಜಿಸಿದ್ದ ಬಿಜೆಪಿಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಬೆರಳ ತುದಿಯಲ್ಲಿ ವಿಶ್ವದ ಎಲ್ಲಾ ಮಾಹಿತಿಗಳು ಲಭ್ಯವಿದ್ದು ತಂತ್ರಜ್ಞಾನ ಬಹಳ ಮುಂದುವರಿದಿದೆ. ಯುವಕರು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲೇ ಸಮಯ ಕಳೆಯುತ್ತಾರೆ. ಹಾಗಾಗಿ ಪಕ್ಷದ ಎಲ್ಲರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಧನೆ ಹಾಗೂ ಕೊಡುಗೆಗಳನ್ನು ತಿಳಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಹೇಳಿದರು.
ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ ಮಾಧ್ಯಮಗಳು ಕೇವಲ ಮೂವತ್ತು ಸಾವಿರ ಜನರನ್ನು ತಲುಪಿದರೆ ಸಾಮಾಜಿಕ ಜಾಲತಾಣಗಳು ಲಕ್ಷಾಂತರ ಜನರನ್ನು ಕ್ಷಣಾರ್ಧದಲ್ಲಿ ತಲುಪಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಇಚ್ಛೆಯಿಂದ ಸಮಾಜದ ಹಿತವನ್ನು ತಿಳಿಸುವ, ಅಥವಾ ಅನ್ಯಾಯವನ್ನು ವಿರೋಧಿಸುವ ಕುರಿತಂತೆ ಏನನ್ನಾದರೂ ಬರೆಯಬಹುದು. ಅದರಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲಿ ಪಕ್ಷದ ಧನಾತ್ಮಕ ಅಂಶಗಳನ್ನು ತಿಳಿಸುವ ಮೂಲಕ ಪಕ್ಷದ ಬಲವರ್ಧನೆಗೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀದೇವಿ ಹಾಗೂ ಕಾರ್ಯಕರ್ತರು ಇತರ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.