ಮಂಗಳೂರು: ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸಿರಿ ಮತ್ತು ಮ್ಯಾಟ್ರಿಕ್ಸ್ ತಂಡಗಳ ವತಿಯಿಂದ ‘ಸ್ವಚ್ಛ ಸುಲ್ತಾನ್ ಬತ್ತೇರಿ’ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.
‘ಸ್ವಚ್ಛತೆಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಈ ಅಭ್ಯಾಸ ಮನೆಯಿಂದಲೇ ಶುರುವಾದರೆ ಅದೆಷ್ಟೋ ಕಸ ಕಡಿಮೆಯಾಗುವುದು‘ ಎಂದು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಪರಿಸರಪ್ರೇಮಿ ನಾಗರಾಜ್ ಬಜಾಲ್ ಹೇಳಿದರು.
ನಾವು ಮನೆಯ ಸುತ್ತ ಬಿಸಾಡುವ ಕಸ ನದಿ ನಾಲೆಗಳ ಮೂಲಕ ಸಮುದ್ರ ಸೇರಿ ಅದರ ದಡವನ್ನು ಮಲಿನಗೊಳಿಸುವುದರೊಂದಿಗೆ ಜಲಚರಗಳಿಗೂ ತೊಂದರೆ ಉಂಟುಮಾಡುತ್ತದೆ ಎಂದರು. ಹಸಿರು ದಳ ಸಂಯೋಜಕರಾದ ಇವರು ನೇತ್ರಾವತಿ ನದಿಯ ಸ್ವಚ್ಛಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಿರಿ ಮತ್ತು ಮ್ಯಾಟ್ರಿಕ್ಸ್ ತಂಡದವರೊಂಡಿಗೆ ಊರಿನವರು ಕೈಜೋಡಿಸಿ ನದಿಯ ದಂಡೆಯನ್ನು ಸ್ವಚ್ಛಗೊಳಿಸಿದರು.
ಈ ಕಾರ್ಯಕ್ರಮದಿಂದ ಪರಿಸರ ಸ್ವಚ್ಚವಾದದ್ದು ಮಾತ್ರವಲ್ಲ, ಜನರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿಯೂ ಸಹಕಾರಿಯಾಯಿತು ಎಂದು ತಂಡದವರು ಅಭಿಪ್ರಾಯಪಟ್ಟರು.
ಸಿರಿ ಹಾಗು ಮ್ಯಾಟ್ರಿಕ್ಸ್ ತಂಡಗಳಲ್ಲಿ ಅನುಷ, ಮೈತ್ರಿ, ಕ್ಷಿತಿ, ವಿನ್ಯಾ, ಪ್ರಜ್ಞಾ, ಸಾಯಿ ಕೃತಿಕ್, ರಾಧಾಕೃಷ್ಣ, ಸಲ್ಮಾನ್, ಅರುಣ್ ಇದ್ದರು.