ಚಾಮರಾಜನಗರ : ಶುಕ್ರವಾರ ಮತದಾನ ಬಹಿಷ್ಕಾರ ನಡೆಸಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಮತಗಟ್ಟೆ ಧ್ವಂಸ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮರು ಚುನಾವಣೆ ಮಾಡುವುದಾಗಿ ಘೋಷಿಸಿದೆ.
ಏ.29 ರ ಸೋಮವಾರದಂದು ಬೆಳಗ್ಗೆ 7 ರಿಂದ ಸಂಜೆವರೆಗೆ 146 ರ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ X ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಶುಕ್ರವಾರದಂದು ಹನೂರು ತಾಲೂಕಿನ ಇಂಡಿಗನತ್ತದಲ್ಲಿ ಮತದಾನಕ್ಕೆ ಅಡ್ಡಿಪಡಿಸಿ, ಮತಯಂತ್ರಗಳನ್ನು ಕೆಲವರು ಹಾನಿ ಮಾಡಿದ್ದರು. ಈ ಸಂಬಂಧ, ಹನೂರು ತಹಶಿಲ್ದಾರ್ ಹಾಗೂ ಚುನಾವಣಾ ಅಧಿಕಾರಿ ಪ್ರತ್ಯೇಕ ದೂರು ಕೊಟ್ಟಿದ್ದರು.
ಮಲೆಮಹದೇಶ್ವರ ಬೆಟ್ಟ ಪೊಲೀಸರು 25 ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಹಲವರು ಗ್ರಾಮ ತೊರೆದು ಪರಾರಿಯಾಗಿದ್ದಾರೆ. ಮೆಂದಾರೆ ಗ್ರಾಮಕ್ಕೆ ಪೊಲೀಸರು ತೆರಳಿ ಮತದಾನ ಮಾಡುವಂತೆ ಇಂದು ಧೈರ್ಯ ತುಂಬಿದ್ದಾರೆ.