ಬೆಳ್ತಂಗಡಿ: ಸಂಗೀತ ಎಲ್ಲ ಕಲೆಗಳಿಗೆ ಜೀವಾಳ . ಸನಾತನ ಸಂಸ್ಕೃತಿಯ ಅಡಿಪಾಯ ಸಂಗೀತ . ಎಲ್ಲರೂ ಸಂಗೀತ ಜ್ಞಾನ ಪಡೆಯುವುದರಿಂದ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿ ವರ್ಷ ಶ್ರೇಷ್ಠ ಸಂಗೀತ ವಿದ್ವಾಂಸರು ,ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಬಿರ ನಡೆಸಿ ಸಂಗೀತಾಭ್ಯಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುತ್ತಿರುವುದು ಮಹತ್ಸಾಧನೆ . ವಿಠಲ ರಾಮಮೂರ್ತಿಯವರ ಕಲಾಸೇವೆ ಅವರ ವಿಶಾಲ ಮನಸ್ಸಿನ ದ್ಯೋತಕವಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ನುಡಿದರು.
ಅವರು ಮೇ 10 ರಂದು ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ ನಡೆಯುತ್ತಿರುವ ೫ ದಿನಗಳ ಸಂಗೀತ ಶಿಬಿರದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ತೀರ್ಥಯಾತ್ರೆ ಕೈಗೊಳ್ಳಲು ಎಲ್ಲರಿಗೂ ಅಸಾಧ್ಯ. ತೀರ್ಥವನ್ನೇ ಮನೆಬಾಗಿಲಿಗೆ ತಂದು ಒದಗಿಸುತ್ತಿರುವುದು ಅವರ ದೊಡ್ಡ ಗುಣ. ತನ್ನ ಕಲಾಸೇವೆಯಿಂದ ದೇಶ ವಿದೇಶಗಳಲ್ಲಿ ಗುರುತಿಸಬಹುದಾದ ಕಲಾವಿದರಾಗಿ ವಿಠಲ ರಾಮಮೂರ್ತಿ ಸಂಗೀತ ಸಾಧನೆ ಮೆರೆದಿದ್ದಾರೆ .
ಅವರ ಕಲಾಜೀವನ ಇನ್ನಷ್ಟು ಔನ್ನತ್ಯಕ್ಕೆ ಏರಲಿ. ವಿದ್ಯಾರ್ಥಿಗಳು ಶಿಬಿರದಿಂದ ಉನ್ನತ ಸಾಧನೆ ಮಾಡಲಿ. ಯಾರಿಗೂ ದೊರಕದ ಅಪೂರ್ವ ಸೌಲಭ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಗೀತ ಜೀವನ ಉತ್ಕೃಷ್ಟವಾಗಿ ರೂಪುಗೊಳ್ಳಲಿ ಎಂದು ಆಶಿಸಿ ಶುಭ ಕೋರಿದರು.
ಸಂಗೀತ ಶಿಬಿರದ ಸಂಯೋಜಕ ವಿದ್ವಾನ್ ವಿಠಲ ರಾಮಮೂರ್ತಿ ಸ್ವಾಗತಿಸಿ,ಕಳೆದ 21 ವರ್ಷಗಳಿಂದ ಮನೆಯಂಗಳದಲ್ಲಿ ಸಂಗೀತಾಭ್ಯಾಸಿಗಳಿಗೆ ರಾಷ್ಟ್ರ ಮಟ್ಟದ ಸಂಗೀತ ಕಲಾವಿದರನ್ನು ಕರೆಸಿ ಶಿಬಿರ ನಡೆಸಿ ಪ್ರೋತ್ಸಾಹಿಸುತ್ತಿ ರುವುದಾಗಿ ತಿಳಿಸಿ ,ಎಡನೀರು ಮಠದ ಕೇಶವಾನಂದ ಭಾರತಿ ಶ್ರೀಗಳವರ ಕೃತಿಗಳ ರಾಗ ಮಾಲಿಕೆಯನ್ನುಡಾ! ರಾಜಕುಮಾರ್ ಭಾರತಿ ಅವರ ಸಂಗೀತ ಸಂಯೋಜನೆಯಲ್ಲಿ ಮುಂದಿನ ವರ್ಷದ ಶಿಬಿರದಲ್ಲಿ ಶ್ರೀಗಳವರಿಂದ ಬಿಡುಗಡೆಗೊಳಿಸುವುದಾಗಿ ತಿಳಿಸಿದರು .
ವೇದಿಕೆಯಲ್ಲಿ ವಯೊಲಿನ್ ಗುರು ಹೊಸಹಳ್ಳಿ ಕೆ .ವೆಂಕಟ್ರಾಮ್, ಸಂಗೀತ ವಿದ್ವಾನ್ ಡಾ!ರಾಜಕುಮಾರ್ ಭಾರತಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ “ಜೀವನ ಅಮೃತದಾಯಕ ಆತ್ಮಜ್ಞಾನದಾಯಕ “,”ಭಜಮಾನಸ ವಿಘ್ನೇಶ್ವರ ಮನೀಶಾಮ್ “,”ಸಕಾಲಚರಾಚರ ದೇವಸ್ವರೂಪ ಬ್ರಹ್ಮ ವಿಷ್ಣು ಮಹೇಶ್ವರ ” ಮತ್ತು” ಪ್ರಥಮದಲಿ ವಂದಿಸುವೆ ವಿಘ್ನನಾಶಕನೇ ” ಸಮೂಹ ಕಂಠ ಗಾಯನ ನಡೆಯಿತು. ಡಾ! ರಾಜಕುಮಾರ್ ಭಾರತಿ ಅವರು “ಕಾಮಿನಿ ಕರೆದು ತಾರೆ ಶ್ರೀ ಮಂಜುನಾಥ ಸ್ವಾಮಿಯ ಬಿಟ್ಟಿರಲಾರೆ ‘ ಗೀತೆ ಪ್ರಸ್ತುತಪಡಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ,ನಿತ್ಯಾನಂದ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಗಳವರು ವಿಠಲ ರಾಮಮೂರ್ತಿ ದಂಪತಿ ಹಾಗು ಕಲಾವಿದರನ್ನು ಗೌರವಿಸಿದರು. ಸಂಜೆ ಸಂಗೀತ ಕಾರ್ಯಕ್ರಮದಲ್ಲಿವಿದ್ವಾನ್ ಹೊಸಹಳ್ಳಿ ವೆಂಕಟ್ರಾಮ್,ಹೊಸಹಳ್ಳಿ ಸುಬ್ಬರಾವ್,ಹೊಸಹಳ್ಳಿ ರಘುರಾಮ್ ,ವಿಶ್ವಜಿತ್ ಮತ್ತು ಕಾರ್ತಿಕೇಯ ವಯೊಲಿನ್ ನಲ್ಲಿ ಹಾಗೂ ಮೃದಂಗದಲ್ಲಿ ಜಯಚಂದ್ರ ರಾವ್ ಮತ್ತು ಖಂಜಿರದಲ್ಲಿ ಹರಿಹರ ಸುಬ್ರಹ್ಮಣ್ಯ ಕಾರ್ಯಕ್ರಮ ನಡೆಸಿಕೊಟ್ಟರು.