ಬೆಳ್ತಂಗಡಿ: ನೀವು ಕೊಟ್ಟ ಒಂದು ಓಟು ಕೊಟ್ಯಂತರ ರೂ.ಗಳ ವಿಕಾಸವನ್ನು ತಂದು ಕೊಟ್ಟಿದೆ. ಇದು ನನ್ನೊಬ್ಬನ ಸಾಧನೆಯಲ್ಲ, ನಿಮ್ಮೆಲ್ಲರ ಬೆಂಬಲದಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಅವರು, ಬುಧವಾರ ಶಿರ್ಲಾಲು, ಕರಂಬಾರು ಗ್ರಾಮಗಳಲ್ಲಿನ ರೂ. 17 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ವಿಕಾಸದ ಹಬ್ಬದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿಯೇ ಇಂತಹ ಹಬ್ಬವನ್ನು ಮೊದಲಬಾರಿಗೆ ಆಚರಿಸಲಾಗಿದೆ. ಇಲ್ಲಿನ ಎರಡು ಗ್ರಾ.ಪಂ.ನ ನಿಮ್ಮ ಒಂದು ಓಟು 17 ಕೋಟಿ ರೂ.ಗಳ ಅಭಿವೃದ್ಧಿಯನ್ನು ತಂದುಕೊಟ್ಟಿದೆ. ತಾಲೂಕಿನ 81 ಗ್ರಾಮಗಳೆಲ್ಲವೂ ನನಗೆ ಒಂದೇ ರೀತಿಯಾಗಿದ್ದು ರೂ.1800 ಕೋಟಿಯ ಅಭಿವೃದ್ಧಿಯನ್ನು ಮಾಡಲಾಗಿರುವ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕ್ಷೇತ್ರವೂ ಒಂದಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರ ಯೋಜನೆಗಳೆಲ್ಲವೂ ಬೂತ್ ಮಟ್ಟದವರಿಗೆ ತಲುಪಿದೆ. ರಾಷ್ಟ್ರೀಯತೆಗೆ ಧಕ್ಕೆಯಾಗದಂತೆ, ಹಿಂದೂ ಭಾವನೆಗಳಿಗೆ ಗೌರವ ತರುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದರು.
ತಾಲೂಕಿನ ಜನತೆಗೆ ಬಿಜೆಪಿ ನೀಡಿದ ಚುನಾವಣಾ ಪ್ರಣಾಳಿಕೆಯಲ್ಲಿನ ಎಲ್ಲಾ ಭರವಸೆಗಳನ್ನು ನಾಲ್ಕು ವರ್ಷಗಳಲ್ಲಿ ಈಡೇರಿಸಿದ್ದೇವೆ. ಇನ್ನು ಒಂದು ವರ್ಷದ ಕಾಮಗಾರಿಗಳೆಲ್ಲಾ ಬೋನಸ್ ಆಗಲಿವೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್ ವಿಕಾಸದ ಹಬ್ಬವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ, ಪ್ರಧಾನ ಕಾರ್ಯದರ್ಶಿ ಗಣೇಶ ಗೌಡ ನಾವರ, ಕಾರ್ಯದರ್ಶಿಗಳಾದ ಆನಂದ ಸಾಲಿಯಾನ್ ಒಡಿಮಾರು, ರಾಮ್ಕುಮಾರ್, ಪ್ರಶಾಂತಕುಮಾರ್ ಪಾರೆಂಕಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ ಹೆಗ್ಡೆ, ಮಾಧವ ಶಿರ್ಲಾಲು, ಶಿರ್ಲಾಲು ಸಿ.ಎ.ಬ್ಯಾಂಕಿನ ಅಧ್ಯಕ್ಷ ನವೀನ್ ಸಾಮಾನಿ. ಅಳದಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲ ಬೈಲು ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೇಸ್ ಕಾರ್ಯಕರ್ತರಾಗಿದ್ದ, ಶಿರ್ಲಾಲು ಸಿ.ಎ.ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ನಾರಾಯಣ ರಾವ್, ಪಿ.ಡಬ್ಲ್ಯು.ಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿನಯ ಹೆಗ್ಡೆ, ರೈತ ಸಂಘದ ಅಧ್ಯಕ್ಷ ಸುಧಾಕರ ಜೈನ್ ಕಜಂಗೆ ಕೊಕ್ರಾಡಿ ಇವರುಗಳು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪದಾಧಿಕಾರಿ ಸದಾಶಿವ ಕರಂಬಾರು ವಂದಿಸಿದರು. ಸತೀಶ್ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.
“ಶಿರ್ಲಾಲು ಗ್ರಾಮದಲ್ಲಿ ಶಾಸಕರ ಅನುದಾನದಿಂದ ಪೂರ್ಣಗೊಂಡ ಯೋಜನೆಗಳು (ಒಟ್ಟು ರೂ. 7.56 ಕೋಟಿ)
ಒಸರು ಗುಂಡಿ ಕಿಂಡಿ ಅಣೆಕಟ್ಟು-300 ಲಕ್ಷ, ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಕಾಂಕ್ರೀಟೀಕರಣ 150 ಲಕ್ಷ, ಹುರುಂಬಿದೊಟ್ಟು ಬಳಿ ನದಿಗೆ ತಡೆಗೋಡೆ 30 ಲಕ್ಷ, ಪೊಯ್ಯೆಲೆ ರಸ್ತೆ ಕಾಂಕ್ರೀಟಿಕರಣ 13 ಲಕ್ಷ, ಶಿರ್ಲಾಲು ಶಾಲೆಯ ಮಾಡಿನ ದುರುಸ್ತಿ ಮತ್ತು ಶೌಚಾಲಯ ರಚನೆ 12 ಲಕ್ಷ, ಪಲ್ಲದಪಲ್ಕೆ ರಸ್ತೆ ಕಾಂಕ್ರೀಟಿಕರಣ 10 ಲಕ್ಷ, ಕೊಡಂಗೆ ಬೈಲು-ಹೊಂಡೇಲು ರಸ್ತೆ ಕಾಂಕ್ರಟೀಕರಣ 10 ಲಕ್ಷ, ಅಟೋರಿಕ್ಷಾ ತಂಗುದಾಣ 6 ಲಕ್ಷ, ಮನಿಲ-ಹೆಟ್ಟೊಟ್ಟು ರಸ್ತೆ ಕಾಂಕ್ರೀಟೀಕರಣ 4 ಲಕ್ಷ, ಶಿರ್ಲಾಲು ಶಾಲೆಗೆ ಕೊಳವೆ ಬಾವಿ 1 ಲಕ್ಷ ; ಆರಂಭಗೊಳ್ಳಲಿರುವ ಯೋಜನೆಗಳು ಬೈರವಕಲ್ಲಿನಿಂದ- ಮನಿಲ ರಸ್ತೆಗೆ ಶಿಲಾನ್ಯಾಸ 200 ಲಕ್ಷ, ಕಿನ್ನಿಕಟ್ಟ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 20 ಲಕ್ಷ”
“ಕರಂಬಾರು ಗ್ರಾಮದಲ್ಲಿ ಶಾಸಕರ ಅನುದಾನದಿಂದ ಪೂರ್ಣಗೊಂಡ ಯೋಜನೆಗಳು (ಒಟ್ಟು ರೂ. 9.44 ಕೋಟಿ)
ಸವಣಾಲಿನಿಂದ ದರ್ಬೆದ ಪಲ್ಕೆಯವರೆಗೆ ಡಾಮರೀಕರಣ ರೂ. 200 ಲಕ್ಷ, ಗುಂಡೇರಿಯಿಂದ ಜೀತ ಮುಕ್ತ ಕಾಲೋನಿಯವರೆಗೆ ಕಾಂಕ್ರೀಟ್ ರಸ್ತೆ 175 ಲಕ್ಷ, ಪರ್ಲಂಡದಿಂದ ಎರ್ಮೆತ್ರೋಡಿಗೆ ಕಾಂಕ್ರೀಟ್ ರಸ್ತೆ 100 ಲಕ್ಷ, ಜೀತ ಮುಕ್ತ ಕಾಲನಿಯಿಂದ ತೋಡಬಾಗಿಲಿನಿವರೆಗೆ ಕಾಂಕ್ರೀಟ್ ರಸ್ತೆ 75 ಲಕ್ಷ, ಕರಂಬಾರು ಕ್ರಾಸಿನಿಂದ ತೋಡಬಾಗಿಲಿನವರೆಗೆ ಮರು ಡಾಮರೀಕರಣ 30 ಲಕ್ಷ, ಎರ್ಮೆತ್ರೋಡಿ ಅಂಗನವಾಡಿಯಿಂದ ಪಂಬೆದಬೆಟ್ಟಿನವರೆಗೆ ಕಾಂಕ್ರೀಟ್ ರಸ್ತೆ 15 ಲಕ್ಷ, ಕರಂಬಾರು ಶಾಲೆಗೆ ಶೌಚಾಲಯ ರಚನೆ ಹಾಗೂ ಹಾಲ್ಗೆ ಟೈಲ್ಸ್ ಅಳವಡಿಕೆ 12 ಲಕ್ಷ, ಶಾಲಾ ಬಳಿ ಕಾಂಕ್ರೀಟ್ ರಸ್ತೆ 10 ಲಕ್ಷ, ದರ್ಭೆ ಅಂಗನವಾಡಿಯ ಮಾಡು ರಿಪೇರಿ ಮತ್ತು ಶೀಟು ಅಳವಡಿಕೆಗೆ ರೂ.2 ಲಕ್ಷ ; ಆರಂಭಗೊಳ್ಳಲಿರುವ ಯೋಜನೆ- ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಫಲ್ಗುಣಿ ನದಿಗೆ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣ ರೂ. 325 ಲಕ್ಷ”
ಶಿರ್ಲಾಲಿನ ವಿಕಾಸದ ಹಬ್ಬದ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯ ರಣಕಹಳೆಯನ್ನು ಶಾಸಕ ಹರೀಶ್ ಪೂಂಜ ಮೊಳಗಿಸಿರುವುದು ಕಂಡು ಬಂತು. ತಮ್ಮ ಭಾಷಣದಲ್ಲಿ ನಾಲ್ಕು ವರ್ಷದ ಸಾಧನೆಗಳನ್ನು ಬಿಚ್ಚಿಟ್ಟ ಅವರು ಜೊತೆಗೆ ಕೇಂದ್ರದ ಸಾಧನೆಗಳನ್ನೂ ವಿವರಿಸಿದರು.
ಬೇಡಿಕೆಯುಳ್ಳ ಇನ್ನಿತರ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು. ಕಾರ್ಯಕ್ರಮದ ಮೊದಲು ಶಾಸಕರು ಶಿರ್ಲಾಲು- ಕರಂಬಾರು ಗ್ರಾಮಗಳಿಗೆ ನೀಡಿದ ಅಭಿವೃದ್ಧಿ ಕಾಮಗಾರಿಗಳ ವಿಡಿಯೋ ಚಿತ್ರಣಗಳನ್ನು ಗ್ರಾಮಸ್ಥರ ಮುಂದೆ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಸಂದರ್ಭ ಮಳೆಧಾರಾಕಾರವಾಗಿ ಸುರಿಯುತ್ತಿದ್ದರೂ ಗ್ರಾಮಸ್ಥರು ಕೊಡೆಗಳ ಆಸರೆ ಪಡೆದು ತಾಳ್ಮೆಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.