ಬಂಟ್ವಾಳ : ದೇವರಿಗೆ ಬ್ರಹ್ಮಕಲಶೋತ್ಸವ ನಡೆಸಿದಂತೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿರುವ ದ್ವೇಷ, ಅಸೂಯೆ, ಮದ, ಮತ್ಸರ ತೊಲಗಿಸಲು ಮನ ಶುದ್ಧೀಕರಣಗೊಳಿಸುವ ಅಗತ್ಯವಿದೆ. ದೇವಸ್ಥಾನಗಳಲ್ಲಿ ನಿರಂತರ ಭಾಗವಹಿಸುವಿಕೆಯಿಂದ ಸಾತ್ವಿಕಗುಣಗಳು ಬೆಳೆದು ದೇವರ ಅನುಗ್ರಹವಾಗುವುದು ಎಂದು ಶ್ರೀ ಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು.
ನೂತನವಾಗಿ ಪುನರ್ ನಿರ್ಮಾಣಗೊಂಡ ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ರಾಯಿ ಗ್ರಾ.ಪಂ.ವ್ಯಾಪ್ತಿಯ ಕೊಲ ಗ್ರಾಮದ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶಾಸಕ ರಾಜೇಶ ನಾಕ್ ಉಳಿಪಾಡಿಗುತ್ತು ಅವರು ಮಾತನಾಡಿ, ಸರಕಾರ ದೈವ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಇದು ಹಿಂದೂ ಧರ್ಮದ ಪರ್ವಕಾಲವಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ೧೮೨ ದೈವ, ದೇವಸ್ಥಾನಗಳ ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಮಂಗಳೂರು ಜಿ.ಆರ್.ಹಾಸ್ಪಿಟಲ್ಸ್ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಜಾತಿ ಮತಗಳ ಬೇಧ, ಭಾವ ತೊಲಗಿಸಿ, ದೇವರ ಆರಾಧನೆಯೊಂದಿಗೆ ಸಮಾಜ ಸೇವೆ, ಕ್ಷಮಾ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಕಟ್ಟೆಮಾರು ಮಂತ್ರದೇವತಾ ಸಾನ್ನಿಧ್ಯದ ಮನೋಜ್ ಕುಮಾರ್ ಕಟ್ಟೆಮಾರು, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ರಾಯಿ ಗ್ರಾ.ಪಂ.ಅಧ್ಯಕ್ಷೆ ರತ್ನಾ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ , ಆನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಎಸ್.ಹೊಳ್ಳ ಪತ್ತುಮುಡಿ,ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಅಭಿಯಂತರರಾದ ವಿಷ್ಣು ಕಾಮತ್, ಶಿವಪ್ರಸನ್ನ ಹಾಗೂ ರಸ್ತೆ ಮತ್ತು ಇತರ ಕಾಮಗಾರಿ ನಿರ್ವಹಿಸಿದ ಸಂತೋಷ್ ಕುಮಾರ್ ರಾಯಿಬೆಟ್ಟು , ನಾಗರಾಜ್, ಮತ್ತಿತರರನ್ನು ಸಮ್ಮಾನಿಸಲಾಯಿತು.
ಮಾಜಿ ಸಚಿವ, ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು. ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ದಿನೇಶ ಸುವರ್ಣ ರಾಯಿ ಮತ್ತು ಪುರುಷೋತ್ತಮ ಕೊಲ ಕಾರ್ಯಕ್ರಮ ನಿರೂಪಿಸಿದರು.