ಬೆಳಗಾವಿ: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ʼಈ ಹಗರಣದ ವಿಚಾರದಲ್ಲಿ ಎಚ್.ಡಿ.ದೇವೇಗೌಡ ಹಾಗು ಅವರ ಕುಟುಂಬ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು. ಅವರು ರಾಜಕೀಯದಿಂದಲೇ ಹೊರಬರಬೇಕುʼ ಎಂದು ಕೇಂದ್ರ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೀಡಿಯೋ ಬಿಡುಗಡೆಯ ಹಿಂದೆ ಯಾರ ಕೈವಾಡ ಇದೆ ಎಂಬುದು ಮುಖ್ಯವಲ್ಲ. ತಪ್ಪು ಯಾರದ್ದು ಎಂಬುದು ಮುಖ್ಯ ಎಂದರು. ಇದು ಸಮಾಜವೇ ತಲೆತಗ್ಗಿಸುವ ವಿಷಯ ಎಂದಿರುವ ಮೊಯ್ಲಿ, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.