ಬೆಳ್ತಂಗಡಿ; ಕನ್ಯಾಡಿಯಲ್ಲಿ ಹತ್ಯೆಗೀಡಾದ ದಿನೇಶ್ ಅವರಿಗೆ ನ್ಯಾಯಕೊಡಿಸುವಂತೆ ಒತ್ತಾಯಿಸಿ ಎಸ್.ಡಿ.ಪಿಐ ಪಕ್ಷದ ನೇತೃತ್ವದಲ್ಲಿ ಬೆಳ್ತಂಗಡಿ ಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹಮ್ಮಿಕೊಳ್ಳಲಾಗಿದ್ದ ಜಾಥಾಕ್ಕೆ ಬೆಳ್ತಂಗಡಿ ಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದಿನೇಶ್ ಅವರನ್ನು ಹತ್ಯೆಗೈದ ಆರೋಪಿ ಹದಿನೈದು ದಿನಗಳಲ್ಲಿ ಜಾಮೀನು ಮೇಲೆ ಹೊರಬಂದಿರುವುದನ್ನು ಗಮನಿಸಿದರೆ ಈ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಲು ಸಾಧ್ಯ ಎಂದರು.
ಕೂಡಲೇ ದಿನೇಶ್ ಕೊಲೆಗಾರ ಕೃಷ್ಣನಿಗೆ ನೀಡಿರುವ ಜಾಮೀನನ್ನು ರದ್ದುಪಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು, ಕುಟುಂಬಕ್ಕೆ ಕೂಡಲೇ 50ಲಕ್ಷ ಪರಿಹಾರ ಒದಗಿಸಬೇಕು. ಅವರಿಗೆ ಎರಡು ಎಕ್ರೆ ಜಾಗ ನೀಡಬೇಕು, ಹಾಗೂ ಅವರ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ಉದ್ಯೀಗ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳು ಈಡೇರುವ ವರೆಗೆ ಪಕ್ಷ ರಾಜ್ಯದಾದ್ಯಂತ ಹೋರಾಟ ಮುಂದುವರಿಸಲಿರುವುದಾಗಿ ಅವರು ತಿಳಿಸಿದರು.
ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಬಿ.ಆರ್ ಭಾಸ್ಕರ ಪ್ರಸಾದ್ ಮಾತನಾಡಿ ದಲಿತನ ಹತ್ಯಾಯೆಯಾದರೆ ಸರಕಾರಗಳು ಜನ ಪ್ರತಿನಿಧಿಗಳು ಕಣ್ಣು ತೆರೆಯುವುದಿಲ್ಲ ಶಿವಮೊಗ್ಗದಲ್ಲಿ ಹತ್ಯೆ ನಡೆದಾಗ ಸರಕಾರ ವ್ಯಕ್ತಪಡಿಸಿದ ಮಾನವೀಯತೆ ಕನ್ಯಾಡಿಯಲ್ಲಿ ಯಾಕೆ ಇಲ್ಲವಾಯಿತು ಎಂದು ಪ್ರಶ್ನಿಸಿದ ಅವರು ಸರಕಾರದ ಕಣ್ಣು ತೆರೆಸಲು ಎಸ್.ಡಿ.ಪಿ.ಐ ಹೋರಾಟಕ್ಕೆ ಮುಂದಾಗಿದೆ ಇನ್ನು ಎಲ್ಲಿಯೇ ಶೋಷಿತರಿಗೆ ಅನ್ಯಾಯವಾದರೆ ಅದನ್ನು ಸಹಿಸಿ ಸುಮ್ಮನಿರಲು ಸಾದ್ಯವಿಲ್ಲ ಎಂದರು.
ಪಕ್ಷದ ಮುಖಂಡರಾದ ಅಲ್ಫೋನ್ಸ್ ಫ್ರಾಂಕೋ, ಆನಂದ ಮಿತ್ತಬೈಲು,ಅಥಾವುಲ್ಲ ಜೀಕಟ್ಟೆ,ನಿಸಾರ್ ಕುದ್ರಡ್ಕ,ಅಕ್ಬರ್ ಬೆಳ್ತಂಗಡಿ, ನವಾಜ್ ಶರೀಫ್ ಕಟ್ಟೆ, ಇಕ್ವಾಲ್ ಬೆಳ್ಳಾರೆ,ಅನ್ವರ್ ಸಾದಾತ್ ಹಾಗೂ ಇತರರು ಜಾಧಾದ ನೇತೃತ್ವ ವಹಿಸಿದ್ದರು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭಗೊಂಡ ಜಾಥಾ ಗುರುವಾಯನಕೆರೆಯ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಂದ ವಾಹನ ಜಾಥಾದಲ್ಲಿ ಮಂಗಳೂರಿಗೆ ಪ್ರಯಾಣಿಸಿತು.