ಬೆಳ್ತಂಗಡಿ : ಹಲ್ಲೆಯಿಂದ ಮೃತಪಟ್ಟ ಬೆಳ್ತಂಗಡಿ ತಾಲೂಕಿನ ಕನ್ಯಾಡಿ-2 ಗ್ರಾಮದ ದಲಿತ ಸಮುದಾಯದ ದಿನೇಶ್ ಎಂಬವರ ಮನೆಗೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ತಿಳಿಸಿ ವೈಯಕ್ತಿಕವಾಗಿ ರೂ. ಒಂದು ಲಕ್ಷ ನೆರವು ನೀಡಿದರು.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಅವರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರವನ್ನು ಈಗಿನ ಸರಕಾರ ನೀಡಿದೆ. ಆದರೆ ದಿನೇಶ ಅವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ತಾರತಮ್ಯ ತೋರಿದೆ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ನಡೆಸಿ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲಿ ಹಾಗೂ ಇವರ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗುವಂತೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸರಕಾರ ಯಾವುದೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಇದರಿಂದ ಜನ ಕಾನೂನನ್ನು ಕೈಗೆತ್ತಿಕೊಂಡು ಇಂತಹ ಅನಾಹುತಗಳು ಸಂಭವಿಸುತ್ತಿವೆ. ಇದನ್ನು ವಿರೋಧಿಸಿ ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಎಂಎಲ್ ಸಿ ಹರೀಶ್ ಕುಮಾರ್,ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ, ಸಚಿವ ರಮಾನಾಥ ರೈ,ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಬೆಳ್ತಂಗಡಿ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ ಹಾಗೂ ರಂಜನ್ ಜಿ. ಗೌಡ, ಕಾರ್ಯದರ್ಶಿಗಳಾದ ಪ್ರವೀಣ್ ಹಾಗೂ ದಯಾನಂದ ಬೆಳಾಲು, ಮಾಜಿ ಜಿಪಂ ಸದಸ್ಯರಾದ ಶೇಖರ ಕುಕ್ಕೇಡಿ,ನಮಿತಾ, ಶಾಹುಲ್ ಹಮೀದ್, ಪ್ರಮುಖರಾದ ಅಬ್ದುಲ್ ರಹಿಮಾನ್ ಪಡ್ಪು, ಉಷಾ ಶರತ್, ಲಾವಣ್ಯ ಬಲ್ಲಾಳ್, ಮನೋಹರ ಇಳಂತಿಲ, ಚಂದು ಎಲ್, ವಸಂತ ಬಿ.ಕೆ, ಪ್ರಭಾಕರ ಧರ್ಮಸ್ಥಳ, ಕೇಶವ ಬೆಳಾಲು, ಪ್ರಭಾಕರ ಓಡಿಲ್ನಾಳ, ರಮಾನಂದ ಧರ್ಮಸ್ಥಳ, ಭರತ್ ಜಯ ವಿಕ್ರಮ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.