ಚಾಮರಾಜನಗರ: ಬೇಸಿಗೆ ಬಂತೆಂದರೆ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗುತ್ತದೆ. ತಾಲೂಕಿನ ಹಲವು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲಿ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕುಂದಕೆರೆ ಗ್ರಾಮವೂ ಒಂದಾಗಿದೆ.
ಗ್ರಾಮದ ನೀರಿನ ನಲ್ಲಿಯಲ್ಲಿ ಕಳೆದ ಒಂದು ವಾರದಿಂದ ನೀರು ಬಂದಿಲ್ಲ. ಹೀಗಾಗಿ ಜನರು ಸುತ್ತಮುತ್ತಲಿನ ಜಮೀನಿಗೆ ತೆರಳಿ ಜಮೀನಿನ ಮಾಲೀಕರನ್ನು ಗೋಗರೆದು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಪಂಚಾಯತಿ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.
ಗ್ರಾಮದಲ್ಲೇ ಪಂಚಾಯತ್ ಸದಸ್ಯರು ಇದ್ದರೂ ನಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ, ಪಿಡಿಒ ಅವರಿಗೆ ಫೋನ್ ಮಾಡಿದ್ರೆ ಹುಷಾರಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಹಾಗೆನೋಡಿದರೆ ಕುಂದಕೆರೆ ಗ್ರಾಮವು ಕಾಡಂಚಿನ ಪ್ರದೇಶದಲ್ಲಿದ್ದು ಇಲ್ಲಿನ ವಾಸಿಗಳು ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲದೆ ಇತರೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದ್ಯ ಬೇಸಿಗೆಯಾಗಿರುವುದರಿಂದ ಬೇರೆ ಯಾವ ಸಮಸ್ಯೆಯನ್ನು ಬಗೆಹರಿಸದಿದ್ದರೂ ಪರ್ವಾಗಿಲ್ಲ ಮೊದಲಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.