ಬೆಳ್ತಂಗಡಿ: ಸಂಪನ್ಮೂಲ ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ 900 ಹೊಸ ಎಮ್.ಎಸ್.ಐ.ಎಲ್.ಮದ್ಯದಂಗಡಿಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆಯಲು ಸರಕಾರ ತೀರ್ಮಾನಿಸಿದ್ದು, ಇದನ್ನು ಕೈಬಿಟ್ಟು ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೊಳಿಸಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಪದಾಧಿಕಾರಿಗಳು, ಯೋಜನೆಯ ಫಲಾನುಭವಿಗಳು, ನವಜೀವನ ಸದಸ್ಯರು, ಬೆಳಗಾವಿಯ ಸುವರ್ಣ ಸೌಧದ ಬಳಿಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಂಬಲ ಸೂಚಿಸಿ ಮದ್ಯ ನಿಷೇಧ ಹೋರಾಟಕ್ಕೆ ಮತ್ತು ಎಮ್.ಎಸ್.ಐ.ಎಲ್. ಅಂಗಡಿ ನೀಡುವ ಸರಕಾರದ ನಿರ್ಧಾರಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯಪಾನ ನಿಷೇಧ ಮಾಡಲು ಸರಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಂಬಲ ವ್ಯಕ್ತಪಡಿಸಿದರು. ನಿಪ್ಪಾಣಿ ಶಾಸಕಿ ಜೊಲ್ಲೆ ಶಶಿಕಲಾ, ಬೆಳಗಾವಿ ಗ್ರಾಮಾಂತ್ರರ ಶಾಸಕ ಸಂಜಯ ಬಿ.ಪಾಟೀಲ, ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಹನುಮಂತ್ ನಿರಾಣಿ ಬಾಗಲಕೋಟೆ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹೋರಾಟದ ತೀವ್ರತೆಯನ್ನು ಅರಿತ ಮುಖ್ಯಮಂತ್ರಿಗಳು ಅಬಕಾರಿ ಸಚಿವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದರು. ಮನವಿ ಸ್ವೀಕರಿಸಿದ ಅಬಕಾರಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ರಾಜ್ಯದಲ್ಲಿ 900 ಮದ್ಯದಂಗಡಿಗಳಿಗೆ ಜನಸಂಖ್ಯೆಯ ಆಧಾರದಲ್ಲಿ ಎಮ್.ಎಸ್.ಐ.ಎಲ್.ಸಂಸ್ಥೆಯ ಬೇಡಿಕೆಯಂತೆ ಅನುಮತಿ ನೀಡಲಾಗಿದೆ. ಆದರೆ ಲೈಸನ್ಸ್ ನೀಡಲಿಲ್ಲ. ಮಾನ್ಯ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ತಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು. ಪ್ರತಿಭಟನೆಯನ್ನು ಹಿಂಪಡೆಯುವಂತೆ ವಿನಂತಿಸಿದರು. ಜನಸಾಮಾನ್ಯರು ಮದ್ಯಪಾನಕ್ಕೆ ಬಲಿಯಾಗಿ ಕುಟುಂಬ ಸಂಸಾರವನ್ನು ಹಾಳು ಮಾಡುವ ಬಗ್ಗೆ ಸರಕಾರಕ್ಕೆ ಕಾಳಜಿಯಿದೆ. ಮದ್ಯ ಮಾರಾಟ ದಂಧೆ, ಕಿರಾಣಿ ಅಂಗಡಿಗಳಲ್ಲಿ ಮಾರಾಟ ವ್ಯಾಪಕವಾಗುತ್ತಿದೆ. ಇದನ್ನು ತಡೆಯಲು ಈ ನಿರ್ಧಾರ ಕೈಗೊಂಡಿದ್ದು ನಿಜ. ಆದರೂ ತಮ್ಮ ಬೇಡಿಕೆಯನ್ನು ಸ್ವೀಕರಿಸಿ ಈ ನಿರ್ಧಾರವನ್ನು ಮುಂದೂಡುತ್ತೇನೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸದಾ ನಮ್ಮ ಬೆಂಬಲವಿದೆ. ಅವಕಾಶ ಬಂದರೆ ಮುಖ್ಯ ಮಂತ್ರಿಗಳ ಜೊತೆಯಲ್ಲಿ ವೇದಿಕೆಯ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸುತ್ತೇನೆಂದು ತಿಳಿಸಿದರು. ಬಳಿಕ ಸುವರ್ಣ ಸೌಧದಲ್ಲಿ ಮುಖಂಡರ ಸಭೆಯನ್ನು ಕರೆದು ಸಮಗ್ರ ಮಾಹಿತಿಯನ್ನು ಪಡೆದರು. ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.
ಈ ಹಕ್ಕೊತ್ತಾಯ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ, ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ, ರಾಜ್ಯ ಕಾರ್ಯದರ್ಶಿ ವಿವೇಕ್ ವಿ.ಪಾಸ್, ನಿ.ಪೂ.ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳಗಾವಿಯ ಚಾರುಕೀರ್ತಿ ಸೈಬಣ್ಣನವರ್, ರಾಜೀವ ದೊಡ್ಡಣ್ಣನವರ್, ಧಾರವಾಡದ ರಾಜಣ್ಣ ಕೊರವಿ, ದಾವಣಗೆರೆಯ ಸುರೇಶ್ ಹೊಸ್ಕೇರಿ, ಗೋಕಾಕ್ ನ ಸೋಮಶೇಖರ ಮೊಗದುಮ್ಮ, ಅಶೋಕ್ ಕುಲಗೋಡ್, ಹಾವೇರಿಯ ಮುರುಗೆಪ್ಪ ಶೆಟ್ಟರ್, ಯೋಜನೆಯ ನಿರ್ದೇಶಕ ಶೀನಪ್ಪ ಮೂಲ್ಯ, ದಿನೇಶ್, ವಸಂತ ಸಾಲ್ಯಾನ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ,ವಿಠಲ್ ಸಾಲ್ಯಾನ್ ಉಪಸ್ಥಿತರಿದ್ದರು.