ಮಡಿಕೇರಿ: ಕೊಡಗಿನ ಸುಗ್ಗಿಹಬ್ಬ ಆಚರಣೆಗೆ ಸಂಬಂಧಿಸಿದಂತೆ ಇದ್ದ ಗೊಂದಲ ನಿವಾರಣೆಯಾಗಿದ್ದು, ಡಿ. 13 ರಂದು ಕೊಡಗಿನಲ್ಲಿ ಹುತ್ತರಿ ಹಬ್ಬ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.
ಕೊಡಗಿನ ಕುಲದೈವ ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ದೇವಳದಲ್ಲಿ ನಡೆದ ಜೋತಿಷ್ಯ ಪ್ರಶ್ನೆಯಲ್ಲಿ ದೇವಳದ ಪಾರಂಪರಿಕ ಜೋತಿಷ್ಯರಾದ ಅಮ್ಮಂಗೇರಿ ಕಣಿಯರ ಶಶಿಕುಮಾರ್ ಅವರು, ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ, ಶುಭ ಗಳಿಗೆಯನ್ನು ನಿಗದಿಪಡಿಸಿದ್ದಾರೆ. ಡಿ. 12ರ ಸೋಮವಾರ ಪಾಡಿ ಶ್ರೀ ಇಗ್ಗುತಪ್ಪ ದೇವಳದಲ್ಲಿ ಹುತ್ತರಿ ಕಲಾಡ್ಚ ಹಬ್ಬ, 13ರ ಮಂಗಳವಾರ ಸಂಜೆ 6.35ಕ್ಕೆ ದೇವಳದಲ್ಲಿ (ದೇವ ಪೋದ್) ನೆರೆ ಕಟ್ಟುವುದು. 7.35ಕ್ಕೆ ಕದಿರು ತೆಗೆಯುವುದು ಮತ್ತು 8.35ಕ್ಕೆ ಪ್ರಸಾದ ಭೋಜನಕ್ಕೆ ಪ್ರಶಸ್ತ ಸಮಯವೆಂದು ನಿಗದಿಪಡಿಸಲಾಗಿದೆ. ಸಾರ್ವಜನಿಕರು (ನಾಡ್ಪೋದ್) ಸಂಜೆ 7.05ಕ್ಕೆ ನೆರೆ ಕಟ್ಟುವದು, 8.05ಕ್ಕೆ ಕದಿರು ತೆಗೆಯುವದು ಮತ್ತು 9.05ಕ್ಕೆ ಭೋಜನವನ್ನು ಮಾಡಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವಳದ ದೇವತಕ್ಕ ಪರದಂಡ ಕಾವೇರಪ್ಪ ಅವರು ಹುತ್ತರಿ ಹಬ್ಬದ ಪ್ರಯುಕ್ತ ಪಾಡಿ ಶ್ರೀ ಇಗ್ಗುತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಸೇರಿ ದೇಶ ಕಟ್ಟು ವಿಧಿಸಲಾಗಿದೆ. ಡಿ. 12 ರಂದು ದೇವಳದಲ್ಲಿ ಕಲಾಡ್ಚ ಹಬ್ಬ ನಡೆದು ಎತ್ತುಪೋರಾಟ, ದುಡಿಕೊಟ್ಟ್ಪಾಟ್ ಮತ್ತು ದೇವರ ಮೂರ್ತಿಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಕಟ್ಟು ಸಡಿಲಿಸಲಾಗುವದು. ಈ ಸಮಯದಲ್ಲಿ ಹಸಿರು ಮರ ಕಡಿಯುವದು, ರಕ್ತಪಾತ, ಪ್ರಾಣಿ ಹಿಂಸೆ, ಮಧು-ಮಾಂಸ ಸೇವನೆ, ಸಭೆ ಸಮಾರಂಭಗಳನ್ನು ನಡೆಸುವದನ್ನು ನಿಷೇಧಿಸಲಾಗಿದೆ. ಎಲ್ಲ ಭಕ್ತ ಬಾಂಧವರು ಶ್ರೀ ದೇವರ ಕಟ್ಟು ಕಟ್ಟಳೆಗಳನ್ನು ಸರಿಯಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ತಕ್ಕ ಮುಖ್ಯಸ್ಥ ಪರದಂಡ ಚಂಗಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ನಿರ್ದೇಶಕ ಪಾಂಡಂಡ ನರೇಶ್, ತಕ್ಕ ಮುಖ್ಯಸ್ಥರಾದ ನಂಬಡಮಂಡ ಕಟ್ಟಿ, ಕಲ್ಯಾಟಂಡ ಮುತ್ತಪ್ಪ, ಪರದಂಡ ಸದಾ ನಾಣಯ್ಯ, ರಘು, ಅಪ್ಪಸ್ವಾಮಿ, ಅಪ್ಪಣ್ಣ, ಸುಬ್ರಮಣಿ, ಕೇಟೋಳಿರ ಗಪ್ಪು ಗಣಪತಿ, ಪೇರಿಯಂಡ ಸುಬ್ರಮಣಿ, ಕುಂಡ್ಯೋಳಂಡ ಮೇದಪ್ಪ, ಕಲಿಯಂಡ ಸಿ.ನಾಣಯ್ಯ, ಕಣಿಯರ ನಾಣಯ್ಯ, ಹರೀಶ್, ಕಾಂಡಂಡ ಚುಮ್ಮ ಅಚ್ಚಪ್ಪ, ಕುಲ್ಲೇಟಿರ ಮುತ್ತಪ್ಪ, ಗುರುವಪ್ಪ, ಮಾರ್ಚಂಡ ಗಣೇಶ್, ಮೇಚಂಡ ಜಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಬಾಚಮಂಡ ಪೊನ್ನಪ್ಪ, ಅರೆಯಡ ಹರೀಶ್, ಪಾರುಪತ್ತೆಗಾರ ಪರದಂಡ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ, ಪ್ರಧಾನ ಅರ್ಚಕ ಕುಶ ಭಟ್ಟ ಸೇರಿದಂತೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು ಇದ್ದರು.