ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ್ ಅರಮನೆಯ ನಿಷೇದಿತ ಪ್ರದೇಶದ ಫೋಟೋ ಶೂಟ್ ಪ್ರಕರಣದ ವರದಿಯನ್ನ ಗುಪ್ತವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.
ಕಳೆದ ಮೇ ತಿಂಗಳನಲ್ಲಿ ಅರಮನೆಯ ಅಂಬಾ ವಿಲಾಸ್ ಹಾಲ್ ಹಾಗೂ ಕಲ್ಯಾಣ ಮಂಟಪದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯ ಪುತ್ರ ಹಾಗೂ ಸೊಸೆಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಪ್ರಕರಣ ಸಾಮಾಜಿಕ ಜಾಲಾತಾಣಗಳ ಮೂಲಕ ಬೆಳಕಿಗೆ ಬಂದಿತು. ಈ ಹಿನ್ನಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಕಮಿಷನರ್ ಗೆ ತಿಳಿಸಿದರು.
ಈ ತನಿಖೆ ನಡೆಸಿದ ನಗರ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಡಾ.ಹೆಚ್.ಟಿ ಶೇಖರ್ ತನಿಖೆಯ ವರದಿಯನ್ನ ಹಿಂದಿನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು ಅವರು ವರದಿಯನ್ನ ಗುಪ್ತವಾಗಿ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಹಕರಿಸಿದ 20 ಜನ ಪೊಲೀಸ್ ಸಿಬ್ಬಂದಿಯನ್ನ ವರ್ಗಾವಣೆ ಸಹ ಮಾಡಲಾಗಿದೆ.
ಈ ಬಗ್ಗೆ ಇಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಫೋಟೋಶೂಟ್ ಪ್ರಕರಣದ ಗುಪ್ತ ವರದಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಇದ್ದು ಇದರ ಬಗ್ಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಳಿಸಿದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಪಡಿಸಿದರು.