ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಮಾರ್ಗವನ್ನು ತೆರವುಗೊಳಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಆಂತರಿಕ ಸಮರ ನಡೆಯುತ್ತಿದೆ. ಆದರೆ, ಅವರು ಹೊರಗೆಲ್ಲೂ ಅದನ್ನು ತೋರಿಸಿಕೊಳ್ಳುತ್ತಿಲ್ಲ ಎಂದರು.
ಅಮಿತ್ ಶಾ ಅವರೇ 2019ರಲ್ಲಿ 75 ವರ್ಷ ಮೇಲ್ಪಟ್ಟ ಎಲ್ಲರನ್ನು ನಿವೃತ್ತಿಗೊಳಿಸುವುದಾಗಿ ಹೇಳಿದ್ದರು. 2014ರಲ್ಲಿ ಪ್ರಧಾನಿಯಾದ ನಂತರ ಮೋದಿಯವರೇ 75 ವರ್ಷಗಳ ನಂತರ ಬಿಜೆಪಿ ಸಂಘಟನೆಯಲ್ಲಾಗಲೀ, ಸರಕಾರದಲ್ಲಾಗಲೀ ಯಾರಿಗೂ ಯಾವುದೇ ಹುದ್ದೆ ನೀಡಬಾರದು ಎಂಬ ನಿಯಮ ರೂಪಿಸಿದ್ದರು.
ಇದರ ಅಡಿಯಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ್ ಸಿನ್ಹಾ ನಿವೃತ್ತರಾದರು. ಎಷ್ಟು ಜನರ ಟಿಕೆಟ್ ಕ್ಯಾನ್ಸಲ್ ಆಗಿದೆಯೋ ಗೊತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಧಾನಿ ರೇಸ್ನಿಂದ ಶಿವರಾಜ್ ಸಿಂಗ್, ವಸುಂಧರಾ ರಾಜೇ, ಖಟ್ಟರ್ ಸಾಹೇಬ್, ಡಾ. ರಮಣ್ ಸಿಂಗ್, ದೇವೇಂದ್ರ ಫಡ್ನವೀಸ್ ಅವರನ್ನೂ ತೆಗೆದುಹಾಕಲಾಗಿದೆ. ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾಗೆ ಹಾದಿ ಸುಗಮವಾಗಲು ಯೋಗಿ ಅವರನ್ನು ತೆಗೆದುಹಾಕುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.