ಹೈದರಾಬಾದ್: ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಸಂಬಂಧಪಟ್ಟ ಹೋಟೆಲ್ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಫುಡ್ ಸೇಫ್ಟಿ ಕಮಿಷನರ್ ತಂಡದ ದಾಳಿ ವೇಳೆ ರಾಮೇಶ್ವರಂ ಕೆಫೆ ಹೋಟೆಲ್ನಲ್ಲಿ ಅವಧಿ ಮುಗಿದ ಬೇಳೆ ಬಳಸಿ ಅಡುಗೆ ಮಾಡಿರುವುದು ಪತ್ತೆಯಾಗಿದೆ.
ಹೈದರಾಬಾದ್ ಸಮೀಪದ ಮಾದಾಪುರದಲ್ಲಿ ದಿ ರಾಮೇಶ್ವರಂ ಕೆಫೆ ಹೋಟೆಲ್ ಇದೆ. ಈ ಹೋಟೆಲ್ನಲ್ಲಿ ಇಂದು ತೆಲಂಗಾಣ ಫುಡ್ ಸೇಫ್ಟಿ ಕಮೀಷನರ್ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ ಅವಧಿ ಮುಗಿದ 100 ಕೆಜಿ ಬೇಳೆ ಪತ್ತೆಯಾಗಿದೆ. ಈ ಮಾಹಿತಿಯನ್ನು ತೆಲಂಗಾಣ ಫುಡ್ ಸೇಫ್ಟಿ ಕಮಿಷನರ್ ಮಾಹಿತಿ ನೀಡಿದೆ.
ರಾಮೇಶ್ವರಂ ಕೆಫೆಯಲ್ಲಿ ಕಳೆದ ಮಾರ್ಚ್ 2024ರ ಅವಧಿ ಮುಗಿದಿರುವ ಬೇಳೆ ಬಳಸಿ ಅಡುಗೆ ಮಾಡಿರುವುದು ಪತ್ತೆಯಾಗಿದೆ. ಅವಧಿ ಮುಗಿದ 10 ಕೆಜಿ ನಂದಿನಿ ಮೊಸರು, 8 ಲೀಟರ್ ನಂದಿನಿ ಹಾಲು ಕೂಡ ಸಿಕ್ಕಿವೆ.
ಲೇಬಲ್ ಸರಿಯಾಗಿ ಇಲ್ಲದ ಅಕ್ಕಿ, ಲೇಬಲ್ ಇಲ್ಲದ 300 ಕೆಜಿ ಬೆಲ್ಲವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅವಧಿ ಮುಗಿದ ದವಸ ಧಾನ್ಯಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೋಟೆಲ್ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೆಡಿಕಲ್ ಫಿಟನೆಸ್ ಸರ್ಟಿಫಿಕೇಟ್ ಕೂಡ ಇಲ್ಲ ಎಂದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ನಡೆದಿರುವ ಈ ದಾಳಿಯ ಮಾಹಿತಿಯನ್ನು ಫುಡ್ ಸೇಫ್ಟಿ ಕಮಿಷನರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗಳನ್ನು ನೋಡಿರುವ ಗ್ರಾಹಕರು ಕರ್ನಾಟಕದಲ್ಲೂ ಇದೇ ರೀತಿ ಖ್ಯಾತ ಹೋಟೆಲ್ಗಳ ಮೇಲೆ ದಾಳಿ ನಡೆಸಬೇಕು. ಕರ್ನಾಟಕದಲ್ಲೂ ಆಹಾರ ಸುರಕ್ಷತಾ ಕಮೀಷನರ್ ಹೋಟೆಲ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಿ ಎಂದರು.