ಒಟ್ಟಾವಾ: ಕೆನಡಾದಲ್ಲಿ 16 ಜನರ ಸಾವಿಗೆ ಕಾರಣನಾದ ಭಾರತ ಮೂಲದ ಟ್ರಕ್ ಚಾಲಕನನ್ನು ಕೆನಡಾದಿಂದ ಗಡಿಪಾರು ಮಾಡಲು ಆದೇಶಿಸಿಸಲಾಗಿದೆ.
2018ರಲ್ಲಿ ಟ್ರಕ್ ಡ್ರೈವರ್ ಜಸ್ಕಿರತ್ ಸಿಂಗ್ ಸಿಧು ಅಜಾಗರೂಕತೆಯಿಂದ ಟ್ರಕ್ ಚಲಾಯಿಸಿ ಸಾಸ್ಕಾಚೆವಾನ್ ಪ್ರಾಂತ್ಯದ ಟಿಸ್ಡೇಲ್ ಬಳಿ ಹಂಬೋಲ್ಟ್ ಬ್ರಾಂಕೋಸ್ ಜೂನಿಯರ್ ಹಾಕಿ ತಂಡದ ಬಸ್ ಅಪಘಾತಕ್ಕೆ ಕಾರಣವಾಗಿದ್ದ.
ಮಾರ್ಗದಲ್ಲಿ ಸ್ಟಾಪ್ ಸಿಗ್ನಲ್ ತೋರಿಸಿದರೂ ಜಸ್ಕಿರತ್ ಸಿಂಗ್ ಸಿಧು ಅದನ್ನು ಲೆಕ್ಕಿಸದೆ ಟ್ರಕ್ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿತ್ತು.
ಈ ಪ್ರಕರಣದ ವಿಚಾರಣೆಯನ್ನು ಕ್ಯಾಲ್ಗರಿಯ ವಲಸೆ ಮತ್ತು ನಿರಾಶ್ರಿತರ ಮಂಡಳಿ ನಡೆಸಿದ್ದು ಗಡಿಪಾರು ನಿರ್ಧಾರ ಪ್ರಕಟಿಸಿದೆ. ಸಿಧು ಕೆನಡಾದ ಪ್ರಜೆಯಲ್ಲ ಮತ್ತು ಆತ ಗಂಭೀರ ಅಪರಾಧ ಎಸಗಿದ್ದಾನೆ ಎಂಬುದಕ್ಕೆ ಪುರಾವೆಗಳಿವೆ. ಅಲ್ಲದೇ ಮೃತಪಟ್ಟವರ ಕುಟುಂಬದವರು ಸಿಧು ಗಡಿಪಾರಿಗೆ ಒತ್ತಾಯಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಹಲವಾರು ಕಾನೂನು ಪ್ರಕ್ರಿಯೆಗಳು ಬರಲಿವೆ. ಗಡಿಪಾರು ಪ್ರಕ್ರಿಯೆಯು ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಸಿಧು ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.