ನವದೆಹಲಿ: ಕೇಂದ್ರ ಸರ್ಕಾರದ 2022ನೇ ವರ್ಷದ ಬಜೆಟ್ನ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದೆ. ಭಾರತದ ಮಧ್ಯಮ ವರ್ಗವು ಸೀತಾರಾಮನ್ರ ನಾಲ್ಕನೇ ಬಜೆಟ್ನಲ್ಲಿ ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲಿನ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ನಿಭಾಯಿಸುವ ಕ್ರಮಗಳ ಭರವಸೆಯನ್ನು ಹೊಂದಿದ್ದಾರೆ.
ಈ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ ಪ್ರಮುಖ ಆದ್ಯತೆ ಆಗಿರುವ ಸಾಧ್ಯತೆ ಇದೆ. ಕೊರೊನಾ ಸೋಂಕು ಹೆಚ್ಚಳ ಆಗುತ್ತಿರುವುದು ಆರ್ಥಿಕತೆಗೆ ಮತ್ತೆ ಹೊಡೆತ ನೀಡಿದೆ.
ಇನ್ನು ಜನವರಿ 31 ಮತ್ತು ಫೆಬ್ರವರಿ 1 ರಂದು ‘ಶೂನ್ಯ ವೇಳೆ’ ಇರುವುದಿಲ್ಲ. ಓಮಿಕ್ರಾನ್ ಆತಂಕದ ಹಿನ್ನೆಲೆ ಈ ಬಾರಿ ಹಲ್ವಾ ಸಮಾರಂಭವನ್ನು ಕೂಡಾ ನಡೆಸಿಲ್ಲ.
ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
ಸೋಮವಾರ ರಾಷ್ಟ್ರಪತಿ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್ ಮಂಡನೆಯ ಒಂದು ದಿನಕ್ಕೂ ಮುನ್ನ ಮಂಡನೆ ಮಾಡಲಾಗುತ್ತದೆ. ಇದು ಕಳೆದ ಒಂದು ವರ್ಷದಲ್ಲಿ ಆರ್ಥಿಕತೆಯ ಸ್ಥಿತಿ, ಆರ್ಥಿಕತೆಗೆ ಇರುವ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವಿವರಣೆಯನ್ನು ಹೊಂದಿರುತ್ತದೆ.