ನವದೆಹಲಿ: ರಸ್ತೆ ಅಪಘಾತ, ಮೋಟಾರು ವಾಹನಗಳ ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನ್ಯಾಯಮಂಡಳಿಗಳಲ್ಲಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅನುಕೂಲವಾಗುವಂತೆ ಅಖಿಲ ಭಾರತ ಮಟ್ಟದಲ್ಲಿ ಮೊಬೈಲ್ ಆಪ್ವೊಂದನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದ ವಿಮಾ ಕಂಪನಿಗಳ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಉದ್ದೇಶಿತ ಆಪ್ ಅಭಿವೃದ್ಧಿಯಿಂದ ಭಾರತದಾದ್ಯಂತ ರಸ್ತೆ ಅಪಘಾತಗಳು, ನ್ಯಾಯಮಂಡಳಿಗಳು, ಪೊಲೀಸ್ ಮತ್ತು ವಿಮಾ ಕಂಪನಿಗಳ ಸಂತ್ರಸ್ತರು ಪರಿಹಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ 2021ರ ಮಾರ್ಚ್ 16 ಮತ್ತು ಆಗಸ್ಟ್ 3 ರಂದು ಸುಪ್ರೀಂಕೋರ್ಟ್ ವಿಸ್ತೃತ ಆದೇಶವನ್ನು ನೀಡಿತ್ತು.
‘ವಿಮಾ ಕಂಪನಿಗಳ ಈ ನಡೆಯನ್ನು ನಾವು ಪ್ರಶಂಸಿಸುವುದಿಲ್ಲ. ನ್ಯಾಯಾಲಯದ ನಿರ್ದೇಶನದಿಂದ ವಿಮಾ ಕಂಪನಿಗಳು ಹೊರಗುಳಿಯಲು ಸಾಧ್ಯವಿಲ್ಲ. ವಿಮಾ ಕಂಪನಿಗಳು ಈ ಆಯಪ್ ತಯಾರಿಸಲು ಸಮರ್ಥರಾಗಿರದಿದ್ದರೆ ನಾವು ಸರ್ಕಾರಕ್ಕೆ ಸೂಚನೆ ನೀಡುತ್ತೇವೆ’ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ.
ಆಪ್ ತಯಾರಿಕೆಗೆ ಸುಪ್ರೀಂಕೋರ್ಟ್ ವಿಮಾ ಕಂಪನಿಗಳಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ.