ಕುಟುಂಬದವರನ್ನೇ ಒಳಗೊಂಡ ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಅನ್ನದಾತರ ಅಗತ್ಯಗಳನ್ನು ಪೂರೈಸುವುದು ಅವರಿಗೆ ಬೇಕಾಗಿಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಉತ್ತರಪ್ರದೇಶ ಮಹೋಬಾದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, , ರೈತರನ್ನು ಸದಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುವುದೇ ಹಲವು ರಾಜಕೀಯ ಪಕ್ಷಗಳ ಕೆಲಸ. ಅದರ ಮೇಲೇ ಅವರು ತಮ್ಮ ಪಕ್ಷದ ತಳಹದಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ದೇಶದಲ್ಲಿ ಒಂದಷ್ಟು ರಾಜಕೀಯ ಪಕ್ಷಗಳು ಸದಾ ಸಮಸ್ಯೆ ರಾಜಕಾರಣ ನಡೆಸುತ್ತವೆ. ಆದರೆ ಬಿಜೆಪಿ ಹಾಗಲ್ಲ. ನಮ್ಮ ಪಕ್ಷದ್ದು ಪರಿಹಾರ ರಾಜಕಾರಣ ಎಂದು ಹೇಳಿದ ಪ್ರಧಾನಿ ಮೋದಿ, ಕುಟುಂಬ ರಾಜಕಾರಣ ಮಾಡುವವರಿಗೆ ರೈತರು ತೊಂದರೆಯಲ್ಲಿ ಇರುವುದೇ ಬೇಕಾಗಿದೆ.
ರೈತರ ಹೆಸರಲ್ಲಿ ದೊಡ್ಡದೊಡ್ಡ ಘೋಷಣೆ ಕೂಗುತ್ತಾರೆ. ಆದರೆ ಅವರಿದ್ದಲ್ಲಿಗೆ ಯಾರೂ ಹೋಗುವುದಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 1.62 ಕೋಟಿ ರೂಪಾಯಿಯನ್ನು ರೈತರ ಅಕೌಂಟ್ಗೆ ನೇರವಾಗಿ ಹಾಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಿನ್ನೆ ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದರು.