ಆಂಧ್ರಪ್ರದೇಶ: ಜುಲೈ 14ರಂದು ಶ್ರೀಹರಿಕೋಟದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ. ಅಂದು ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III (LVM3) ಉಡಾವಣಾ ವಾಹನ ಮೂಲಕ ಚಂದ್ರಯಾನ ಉಡಾವಣೆ ಆಗಲಿದೆ ಇದಕ್ಕಾಗಿ ಇಸ್ರೋ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಪ್ರಯೋಗ ಯಶಸ್ವಿಯಾಗಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಂದ್ರಯಾನ-3 ಮಿಷನ್ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶವೇ ಎದುರು ನೋಡುತ್ತಿದೆ.
ಚಂದ್ರ ಗೃಹದ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಆದ ನಂತರ ಅಲ್ಲಿನ ಭೂವಿಜ್ಞಾನ ಮತ್ತು ಪರಿಸರವನ್ನು ಅನ್ವೇಷಿಸುವ ಗುರಿಯನ್ನು ಚಂದ್ರಯಾನ-3 ಮಿಷನ್ ಹೊಂದಿದೆ. ಇದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಭಾರತದ ಎರಡನೇ ಪ್ರಯತ್ನವಾಗಿದೆ.
ಚಂದ್ರಯಾನ-3 ಉಡಾವಣೆ ಕುರಿತು ಮಾತನಾಡಿರುವ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ‘ಚಂದ್ರಯಾನ-3 ಮಿಷನ್ಗೆ ಸಿದ್ಧತೆಗಳು ಸ್ಥಿರವಾಗಿ ನಡೆಯುತ್ತಿವೆ’ ಎಂದು ಖಚಿತಪಡಿಸಿದ್ದಾರೆ.
ಚಂದ್ರಯಾನ-2 ಮಿಷನ್ ಕಾರ್ಯಾಚರಣೆಯು ಸಣ್ಣ ಕಾರಣಗಳಿಂದ ಅಂತಿಮ ಹಂತದಲ್ಲಿ ವಿಫಲವಾಗಿದೆ ಎಂದು ಸೋಮನಾಥ್ ತಿಳಿಸಿದ್ದಾರೆ. ಈ ಹಿಂದೆ ಗುರುತಿಸಲಾದ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಇದರಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಬಾಹ್ಯಾಕಾಶ ನೌಕೆಯು ಹೆಚ್ಚಿನ ವೇಗದಲ್ಲಿ ಚಂದ್ರನ ಮೇಲೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಸುಧಾರಿತ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಇದರಲ್ಲಿ ನಡೆಯಲಿದೆ. ಹೆಚ್ಚುವರಿ ಸಂವೇದಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.