ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಂದು (ಜುಲೈ 10) ಗುಜರಾತ್ ನ ಗಾಂಧಿನಗರದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಜುಲೈ 24 ರಂದು ನಡೆಯಲಿರುವ ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ಸದಸ್ಯರು ಜುಲೈ ಮತ್ತು ಆಗಸ್ಟ್ ನಲ್ಲಿ ನಿವೃತ್ತರಾಗಲಿದ್ದಾರೆ ಎಂದು ಆಯೋಗ ತಿಳಿಸಿದೆ. ಸದಸ್ಯರ ನಿವೃತ್ತಿಯಿಂದಾಗಿ ರಾಜ್ಯಸಭೆಯಲ್ಲಿ ಖಾಲಿಯಾಗಲಿರುವ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳದ ಡೆರೆಕ್ ಒ’ಬ್ರಿಯಾನ್ ಮತ್ತು ಗುಜರಾತ್ ನ ಎಸ್ ಜೈಶಂಕರ್ ಸೇರಿದ್ದಾರೆ. ಖಾಲಿ ಇರುವ ರಾಜ್ಯಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜುಲೈ 24 ರಂದು ಮತ ಎಣಿಕೆ ನಡೆಯಲಿದೆ. ವಿನಯ್ ಡಿ ತೆಂಡೂಲ್ಕರ್ ಜುಲೈ 28 ರಂದು ನಿವೃತ್ತರಾಗಲಿರುವುದರಿಂದ ಗೋವಾದಿಂದ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ದಿನೇಶ್ಚಂದ್ರ ಜೆಮಲ್ ಭಾಯ್ ಅನವಾಡಿಯಾ, ಲೋಖಂಡ್ ವಾಲಾ ಜುಗಲ್ ಸಿನ್ಹ ಮಾಥುರ್ಜಿ, ಸುಬ್ರಮಣ್ಯಂ ಜೈಶಂಕರ್ ಕೃಷ್ಣಸ್ವಾಮಿ ಅವರು ಆಗಸ್ಟ್ 18 ರಂದು ನಿವೃತ್ತರಾಗಲಿದ್ದು, ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.