News Karnataka Kannada
Saturday, April 27 2024
ಮೈಸೂರು

ಮೈಸೂರು: ಅಕ್ಷರ ಸಂಸ್ಕೃತಿಗೂ ಮುನ್ನವೇ ‘ದಿನದರ್ಶಿಕೆ’ ಪರಿಕಲ್ಪನೆ ಇತ್ತು- ಬನ್ನೂರು ರಾಜು

Mysore/Mysuru: The concept of 'Dinadarshika' existed even before akshara culture: Bannur Raju
Photo Credit : By Author

ಮೈಸೂರು: ದಿನದರ್ಶಿಕೆ ಅಥವಾ ಕ್ಯಾಲೆಂಡರ್ ಎಂಬುದು ನಮ್ಮಲ್ಲಿ ಅಕ್ಷರ ಸಂಸ್ಕೃತಿಗೂ ಮೊದಲೇ ಇದ್ದು ಅದು ಕಾಲಕ್ಕೆ ತಕ್ಕಂತೆ ಆಯಾ ಕಾಲಘಟ್ಟಗಳಲ್ಲಿ ತಂತ್ರಜ್ಞಾನದೊಡನೆ ಬೆಳೆದು ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಬಹು ವರ್ಣಮಯವಾಗಿ ವಿವಿಧ ರೂಪಗಳಲ್ಲಿ ಜನಾಕರ್ಷಣೀಯವಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಕುವೆಂಪು ನಗರದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಆಯೋಜಿಸಿದ್ದ 2023 ರ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಓರ್ವ ವ್ಯಕ್ತಿ ಮಾಡಲಾಗದ್ದನ್ನು ಒಂದು ಸಂಘ ಮಾಡಬಲ್ಲದು ಹಾಗಾಗಿ ಸಂಘ ಶಕ್ತಿ ಅದರಲ್ಲೂ ವಿಶೇಷವಾಗಿ ಕಾರ್ಮಿಕ ಶಕ್ತಿ ಬಹುದೊಡ್ಡದೆಂದೂ, ಇಂಥ ಶಕ್ತಿಯಿಂದ ಸಮಾಜದ ಕ್ಷೇಮಾಭಿವೃದ್ಧಿ ಸಾಧ್ಯವೆಂದರು.

ಆದರ್ಶನೀಯ ಶ್ರೇಷ್ಠ ವ್ಯಕ್ತಿ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರಿನಲ್ಲಿರುವ ಈ ಸಂಘವು ತನ್ನದೇ ಆದ ಸಂಘಟನೆಯಿಂದ ನಿಸ್ವಾರ್ಥ ಜನೋಪಯೋಗಿ ಕಾರ್ಯಗಳನ್ನು, ಸಮಾಜಾಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಒಂದು ವಿಶಿಷ್ಟ ಸಂಸ್ಥೆಯಾಗಿದೆ. ಮಹನೀಯರ ಜಯಂತಿ ಮತ್ತು ಪುಣ್ಯಸ್ಮರಣೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗಳು ಸೇರಿದಂತೆ ಸಾಮಾಜಿಕ ಅನಿಷ್ಟಗಳು ಹಾಗೂ ಅವುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತಹ ಜನಜಾಗೃತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವ ಒಂದು ಅಪರೂಪದ ಕಾರ್ಮಿಕ ಸಂಘಟನೆ ಇದಾಗಿದ್ದು ಇತರೆ ಸಂಘ-ಸಂಸ್ಥೆಗಳಿಗೆ ಇದು ಮೇಲ್ಪಂಕ್ತಿಯಾಗಿ ಮಾದರಿಯಾಗಿದೆ ಎಂದರು.

ಕ್ಯಾಲೆಂಡರ್ ಅಥವಾ ದಿನದರ್ಶಿಕೆ ಎಂಬುದು ಇಂದು ನಿನ್ನೆಯದಲ್ಲ. ಇದಕ್ಕೆ ಸುದೀರ್ಘವಾದ ಪ್ರಾಚೀನ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯಲ್ಲಿ ಇದು ಹಾಸು ಹೊಕ್ಕಾಗಿದ್ದು ನಮ್ಮ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಟ ಸ್ಥಾನವಿದ್ದು ದಿನಗಣನೆ ಯ ಕಾಲಜ್ಞಾನದ, ಕಾಲ ಪ್ರಜ್ಞೆಯ ಪ್ರತೀಕವಾಗಿದೆ. ಗೋಡೆಯಲ್ಲಿದ್ದುಕೊಂಡೇ ನಮ್ಮನ್ನು ಪ್ರತಿದಿನವೂ ಎಚ್ಚರಗೊಳಿಸುವ ಒಂದು ವಿಶಿಷ್ಟ ಸಾಧನ ದಿನದರ್ಶಿಕೆ. ಕಳೆದು ಹೋದ ನಂತರ ಮತ್ತೆ ಮರಳಿ ಬಾರದ ವಸ್ತುವೆಂದರೆ ಅದು ಕಾಲ. ಹಾಗಾಗಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಕಾರ್ಮಿಕರು ಕಾಲದ ಬೆಲೆಯನ್ನು ಬಲ್ಲವರಾಗಿರಬೇಕು. ಇಂತಹ ಅಮೂಲ್ಯವಾದ ಕಾಲದ ಬೆಲೆಯನ್ನು ಪ್ರತಿದಿನ ನೆನಪಿಸುವ ದಿನದರ್ಶಿಕೆಯನ್ನು ಬಹುಸುಂದರವಾಗಿ ಅಷ್ಟೇ ವಿಶಿಷ್ಟವಾಗಿ ಹೊರತಂದಿರುವ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಈ ಸರಳ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕರಾದ ಎಸ್.ಎಸ್.ಉಮೇಶ್ ಅವರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಒಂದು ಸಂಘವನ್ನು ಅದೂ ಕೂಡ ಕಾರ್ಮಿಕರ ಸಂಘವನ್ನು ಕಟ್ಟುವುದು ಅದನ್ನು ಸನ್ಮಾರ್ಗದಲ್ಲಿ ನಡೆಸುವುದು ಬಹಳ ಕಷ್ಟ. ಆದರೆ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಎಲ್ಲರೂ ಒಗ್ಗೂಡಿ ಕ್ರಿಯಾತ್ಮಕವಾಗಿ ಸಂಘಟನೆಯನ್ನು ಮಾಡಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಒಂದು ಅಪರೂಪದ ಕಾರ್ಮಿಕ ಸಂಘಟನೆಯಾಗಿದೆ. ಇಂತಹ ಮಾದರಿ ಕಾರ್ಮಿಕ ಸಂಘಟನೆ ತಮಗಾಗಿ ಸರ್ಕಾರ ನೀಡುತ್ತಿರುವ ಎಲ್ಲಾ ರೀತಿಯ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಇನ್ನೂ ಸದೃಢವಾಗಿ ಬೆಳೆಯಬೇಕೆಂದ ಅವರು, ಒಂದು ಮಗು ಹುಟ್ಟಿದಂದಿನಿಂದ ಮಣ್ಣಾಗುವ ತನಕ ಶಿಕ್ಷಣದಿಂದ ಹಿಡಿದು ಆರೋಗ್ಯ, ಆರೈಕೆ, ಆಹಾರ, ವಸತಿ, ಮದುವೆ, ಮುಂಜಿ, ನೋವು ನಲಿವುಗಳಿಗೆ ಕೊನೆಗೆ ಸತ್ತಾಗ ಅಂತ್ಯ ಸಂಸ್ಕಾರಕ್ಕೂ ವಿವಿಧ ಯೋಜನೆಗಳ ಮೂಲಕ ಸರ್ಕಾರ ನೆರವು ನೀಡುತ್ತಿದೆ ಎಂದು ಕಾರ್ಮಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು.

ಹಿರಿಯ ಸದಸ್ಯ ಬಸವರಾಜು ಅವರು ಸಂಘದ ಹುಟ್ಟು ಮತ್ತು ಬೆಳವಣಿಗೆ ಹಾಗೂ ಮುಂದಿನ ದಿನಗಳಲ್ಲಿ ಸಂಘ ಮಾಡಬೇಕಾಗಿರುವ ಒಳ್ಳೆಯ ಕಾರ್ಯಗಳ ಬಗ್ಗೆ ಮಾತನಾಡಿ ಸಂಘದ ಹಿತ ದೃಷ್ಟಿಯಿಂದ ಹಲವು ಸಲಹೆಗಳನ್ನು ನೀಡಿದರು. ಸಂಘದ ಅಧ್ಯಕ್ಷ ಎಸ್. ಮಹೇಶ್ ಜಯನಗರ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಎಂ.ಎಸ್. ಸುರೇಶ್ ಕುಮಾರ್, ಕಾರ್ಯದರ್ಶಿ ಎಂ.ರವಿಕುಮಾರ್, ನಿರ್ದೇಶಕರುಗಳಾದ ಚಂದ್ರೇಗೌಡ, ಅನಿಲ್ ಕುಮಾರ್, ಉದ್ಯಮಿಗಳಾದ ಚೇತನ್, ಸಂತೋಷ್ ಕುಮಾರ್, ಹಾಗೂ ರಾಜೇಶ್ವರಿ ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು