News Karnataka Kannada
Friday, May 03 2024
ಮೈಸೂರು

ಮೈಸೂರು: ಘನತೆ ಕಳೆದುಕೊಳ್ಳುತ್ತಿರುವ ಮೈಸೂರು ದಸರಾ ಕವಿಗೋಷ್ಠಿ- ಬನ್ನೂರು ರಾಜು

Mysore
Photo Credit : By Author

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಜರುಗುವ ಒಂದು ಕಾಲದಲ್ಲಿ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಘನತೆ, ಗೌರವ,ಖ್ಯಾತಿಯನ್ನು ಹೊಂದಿದ್ದ ಮೈಸೂರು ದಸರಾದಷ್ಟೇ ಪರಂಪರೆ ಇತಿಹಾಸವಿರುವ ಮೈಸೂರು ದಸರಾ ಕವಿಗೋಷ್ಠಿ ಇಂದು ತನ್ನ ಪಾರಂಪರಿಕ ಘನತೆಯನ್ನು ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತಿದೆಯೆಂದು ಕವಿ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.

ನಗರದ ನಿಮಿಷಾಂಬ ಬಡಾವಣೆಯ ಹಿರಿಯ ನಾಗರೀಕರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ಮುದ್ದುಕೃಷ್ಣ ಪ್ರಕಾಶನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಏರ್ಪಡಿಸಿದ್ದ ಸಾಹಿತ್ಯ ದಿಗ್ಗಜ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಜನ್ಮದಿನೋತ್ಸವ ನೆನಪಿನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತೇಜಸ್ವಿ ಹಾಗೂ ದಿನಕರ ದೇಸಾಯಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದ ಅವರು, ಕುವೆಂಪು, ಬಿಎಂಶ್ರೀ, ಬೇಂದ್ರೆ, ಜಿಎಸ್ಸೆಸ್, ನಿಸಾರ್, ಕಣವಿ, ಲಿಗಾಡೆ, ಶಾಂತಾದೇವಿ, ಹಾಮಾನಾ, ಅನಂತಮೂರ್ತಿ ಮುಂತಾದ ಸಾಹಿತ್ಯ ದಿಗ್ಗಜರ ಹೆಜ್ಜೆಗಳಿರುವ ರಾಷ್ಟ್ರಮಟ್ಟದ ಬಹು ಮಹತ್ವದ ಮೈಸೂರು ದಸರಾ ಕವಿಗೋಷ್ಠಿ ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಅದು ಕಳಾಹೀನವಾಗುತ್ತಿದೆ ಯೆಂದರು

ಸಾಮಾನ್ಯವಾಗಿ ತೊಂಬತ್ತರ ದಶಕದವರೆಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉಸ್ತುವಾರಿಯಲ್ಲಿ ಸರ್ಕಾರ ಮೈಸೂರು ದಸರಾ ಕವಿಗೋಷ್ಠಿ ನಡೆಸುತ್ತಿತ್ತು.ಆಗ ಎಲ್ಲಾ ವಯೋಮಾನದ ಕವಿಗಳು ಹಾಗೂ ಕಾವ್ಯದ ಎಲ್ಲಾ ಪ್ರಕಾರದ ಕವಿತೆಗಳು ಒಂದೇ ವೇದಿಕೆಯಲ್ಲಿ ಪ್ರಸ್ತುತಿ ಪಡಿಸಿ ಕಾವ್ಯ ಲೋಕವನ್ನು ಬೆಳಗುತ್ತಿದ್ದವು ಮತ್ತು ಕಾವ್ಯಾಸಕ್ತರನ್ನು ರಂಜಿಸುತ್ತಿದ್ದವು.

ಆದರೆ ಈಗ ದಸರಾ ಮಹೋತ್ಸವದ ಕವಿಗೋಷ್ಠಿಯ ಉಪಸಮಿತಿಯು ರಾಜಕಾರಣಿಗಳ ಮತ್ತು ಅಧಿಕಾರಿಗಳ ಸುಪರ್ದಿಗೆ ಹೋದ ನಂತರ ಚಿಗುರು ಕವಿಗೋಷ್ಠಿ, ಅರಳು ಕವಿಗೋಷ್ಠಿ,ಚುಟುಕು ಕವಿ ಗೋಷ್ಠಿ,ಯುವ ಕವಿಗೋಷ್ಠಿ ಎಂದೆಲ್ಲಾ ವಿಂಗಡಿಸಿ ಪ್ರಧಾನ ದಸರಾ ಕವಿ ಗೋಷ್ಠಿಯ ಘನತೆಯನ್ನೇ ಮಂಕುಗೊಳಿಸುತ್ತಿದ್ದಾರೆ. ಹಾಗಾಗಿ ಈ ಹಿಂದೆ ನಡೆಯುತ್ತಿದ್ದಂತೆ ಒಂದೇ ವೇದಿಕೆಯಲ್ಲಿ ಎಲ್ಲಾ ರೀತಿಯ ಕಾವ್ಯಪ್ರಾಕಾರಗಳ ಬಹುಭಾಷಾ ಕವಿಗೋಷ್ಠಿಯನ್ನು ನಡೆಸುವುದು ಸೂಕ್ತವೆಂದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ದಿಗ್ಗಜರಾದ ಪೂರ್ಣಚಂದ್ರ ತೇಜಸ್ವಿ ಮತ್ತು ದಿನಕರ ದೇಸಾಯಿ ಅವರ ಸಾಹಿತ್ಯ ಸಾಧನೆಯನ್ನು ಗುಣಗಾನ ಮಾಡಿ ಇದೊಂದು ಸಾರ್ಥಕವಾದ ಕಾರ್ಯಕ್ರಮವೆಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಖ್ಯಾತ ಮುಕ್ತಕ ಕವಿ ಹಾಗೂ ಮುದ್ದುಕೃಷ್ಣ ಪ್ರಕಾಶನದ ಅಧ್ಯಕ್ಷ ಎಂ.ಮುತ್ತುಸ್ವಾಮಿ ಅವರು ಜ್ಯೋತಿ ಬೆಳಗುವುದರ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಇದೇ ವೇಳೆ ಕಾವ್ಯ ದಿಗ್ಗಜ ಧ್ವಯರಾದ ದಿನಕರ ದೇಸಾಯಿ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಗೌರವಾರ್ಥ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಸಿ.ಬಸಪ್ಪ ಸಾಲುಂಡಿ, ಪ್ರಭುಸ್ವಾಮಿ ಗಟ್ಟಿವಾಡಿಪುರ, ನಾಗಮ್ಮ, ಸಂಗೀತ ವಿದ್ವಾನ್ ಕೃಷ್ಣಮೂರ್ತಿ, ಪ್ರೊ.ಅರ್.ಎ. ಕುಮಾರ್ ಮಂಡ್ಯ, ಟಿ.ಸತ್ಯನಾರಾಯಣ್, ಎನ್.ವಿ.ರಮೇಶ್, ಜೆ.ಪ್ರಭಾ ಶಾಸ್ತ್ರಿ, ಸಿದ್ದರಾಮಪ್ಪ, ಗೋಪಿನಾಥ್, ಎಂ.ಆರ್.ಆನಂದ, ಡಾ.ಎಸ್.ಪುಟ್ಟಪ್ಪ ಮುಡಿಗುಂಡ, ರಾಜು ಮೈಸೂರು, ಶಾಂತಕುಮಾರಿ, ಅಲಮೇಲಮ್ಮ ಮರೀಗೌಡ, ಬೆಮೆಲ್ ದಶರಥ ಮುಂತಾದ ಆಸಕ್ತ ಇಪ್ಪತ್ತಕ್ಕೂ ಹೆಚ್ಚು ಕವಿ-ಕವಯತ್ರಿಯರು ತಮ್ಮ ಕವಿತೆಗಳನ್ನು ವಾಚನ ಮಾಡಿ ಕಾವ್ಯ ದಿಗ್ಗಜರಾದ ಪೂರ್ಣಚಂದ್ರ ತೇಜಸ್ವಿ ಹಾಗೂ ದಿನಕರ ದೇಸಾಯಿ ಅವರಿಗೆ ಕಾವ್ಯ ಗೌರವ ನಮನ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಮಾಜ ಸೇವಕರಾದ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಪ್ರಭುಸ್ವಾಮಿ ಅವರು ಅಧ್ಯಕ್ಷ ನುಡಿಗಳನ್ನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲಾ ಕವಿ- ಕವಿಯತ್ರಿಯರಿಗೆ ಅಭಿನಂದನಾ ಪತ್ರ ಮತ್ತು ಪುಸ್ತಕ ರೂಪದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಮುಖ್ಯ ಅತಿಥಿ ಗಳಾಗಿ ಅರೋಗ್ಯ ಇಲಾಖೆಯ ವಿಶ್ರಾಂತ ಸಹ ನಿರ್ದಶಕರಾದ ಚೆಲುವೇಗೌಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕವಿ ಹಾಗೂ ಗಾಯಕ ಗೋಪಿನಾಥ್ ಅವರು ಪ್ರಾಥನಾ ಗೀತೆಯಾಗಿ ಮಹಾಕವಿ ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವಾ ” ಗೀತೆಯನ್ನು ಹಾಡಿ ನೆರೆದಿದ್ದ ಕಾವ್ಯಾಸಕ್ತರ ಗಮನ ಸೆಳೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು