ಕೃಷ್ಣರಾಜಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಮೀನಿಗೆ ನುಗ್ಗಿದ ನೀರಿನಿಂದಾಗಿ ಫಸಲು ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಯುಧ ಪೂಜೆಯ ಪ್ರಯುಕ್ತ ಮಾರಾಟ ಮಾಡಲು ತಂದು ರಾಶಿಹಾಕಿದ್ದ ಬೂದಕುಂಬಳ ಕಾಯಿಗಳು ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಕೊಮ್ಮೇನಹಳ್ಳಿ ಗ್ರಾಮದ ಬಳಿ ನೇರಳೆ ಕಟ್ಟೆಗೆ ಪ್ರವಾಹದಂತೆ ನುಗ್ಗಿದ ನೀರು ಗ್ರಾಮದ ಹನುಮಂತೇಗೌಡ, ಬೋರೇಗೌಡ, ಹರೀಶ್, ಉದಯ್ಕುಮಾರ್, ಬಾಬು, ಷಣ್ಮುಖ, ದಿಲೀಪ್, ಮಹೇಂದ್ರ, ತೊಳಸಿ, ಮುಂತಾದ ರೈತರ ಜಮೀನುಗಳು ಹಾಗೂ ತೋಟಗಳಿಗೆ ನುಗ್ಗಿ ಬಾಳೆ, ಕಬ್ಬು, ತೆಂಗು, ಅಡಿಕೆ, ಅವರೆ, ಸಿಹಿಗುಂಬಳ, ಬೂದಕುಂಬಳ, ಮುಸುಕಿನ ಜೋಳ, ಸೇರಿದಂತೆ ವಿವಿಧ ಬೆಳೆಗಳು ಮಳೆಯ ನೀರಿನಿಂದ ಕೊಚ್ಚಿಹೋಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಣ್ಣೀರಿಡುವಂತಾಗಿದೆ.
ಕೊಮ್ಮೇನಹಳ್ಳಿ ಗ್ರಾಮದ ಶೇ.90ರಷ್ಟು ತೋಟಗಳು ಮಳೆಯ ನೀರಿನ ರಭಸಕ್ಕೆ ಸಿಲುಕಿ ಭಾರಿ ಪ್ರಮಾಣದ ಕೊರಕಲು ನಿರ್ಮಾಣವಾಗಿ ರೈತರಿಗೆ ಭಾರಿ ಸಂಕಷ್ಟ ಉಂಟಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮವು ಕೆಶೀಪ್ ಯೋಜನೆಯಡಿಯಲ್ಲಿ ಅವೈಜ್ಞಾನಿಕವಾಗಿ ನೇರಳೆಕಟ್ಟೆ ಯನ್ನು ದುರಸ್ತಿಮಾಡಿ ಕಟ್ಟೆಯ ಕೋಡಿಯನ್ನು ಎತ್ತರಿಸದ ಕಾರಣ ಭಾರಿ ಪ್ರಮಾಣದ ನೀರು ತೋಟಗಳಿಗೆ ನುಗ್ಗಿ ಅಪಾರ ನಷ್ಟವುಂಟಾಗಿದೆ ಎಂದು ಗ್ರಾಮದ ಪ್ರಗತಿಪರ ರೈತ ಹರೀಶ್ ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಬಹುತೇಕ ಕೆರೆ-ಕಟ್ಟೆಗಳು ಮಳೆಯ ನೀರಿನಿಂದ ಭರ್ತಿಯಾಗಿ ತುಂಬಿ ತುಳುಕುತ್ತಿದ್ದು, ಎಲ್ಲಾ ಕೆರೆಗಳು ಕೋಡಿ ಬಿದ್ದು, ಅಪಾರ ಪ್ರಮಾಣದಲ್ಲಿ ಮಳೆಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ರೈತರು ತೋಟಗಳನ್ನು ಹದಮಾಡಲು ಉಳುಮೆ ಮಾಡಿ ಬೆಳೆಗಳಿಗೆ ಹಾಕಿದ್ದ ರಸಗೊಬ್ಬರಗಳು ಸಂಪೂರ್ಣವಾಗಿ ನೀರು ಪಾಲಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.