ಬೆಂಗಳೂರು: ರೈತರಿಗಾಗಿ ಹಣ ಕೇಳಿದ್ದು, ಗ್ಯಾರಂಟಿಗಾಗಿ ಹಣ ಕೇಳಿಲ್ಲ ಮತ್ತು ಕೇಳುವುದು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಚೊಂಬು ಹಿಡಿದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಗ್ಯಾರಂಟಿ ಈಡೇರಿಕೆಗೆ ಹಣ ಸಾಕಾಗುತ್ತಿಲ್ಲ. ಕೇಂದ್ರದ ಹಣ ಪಡೆಯಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬರ ಪರಿಹಾರಕ್ಕೆ 18,771 ಕೋಟಿ ರೂ. ಹಣ ಕೇಳಿದ್ದೇವೆ. ನಾವು 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ.
ಅಶೋಕ್, ಬೊಮ್ಮಾಯಿ,ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಈಗ ಜೆಡಿಎಸ್ ಕೂಡಾ ಸೇರಿಸಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಗಾಂಧಿ ಪ್ರತಿಮೆಯಿಂದ ದೇವರಾಜ್ ಅರಸ್ ಪ್ರತಿಮೆ ವರೆಗೆ ಕಾಂಗ್ರೆಸ್ ನಾಯಕರು ಚೊಂಬನ್ನು ತಲೆ ಮೇಲೆ ಇಟ್ಟುಕೊಂಡು ಪಾದಯಾತ್ರೆ ನಡೆಸಿ ಪ್ರತಿಭಟಿಸಿದರು.