ಮೈಸೂರು: ಸಾಧನೆ ಎನ್ನುವುದು ಸುಲಭವಾಗಿ ಬರುವುದಿಲ್ಲ. ಅದಕ್ಕೆ ನಗರ ಪ್ರದೇಶ, ಗ್ರಾಮೀಣ ಎನ್ನುವ ತಾರತಮ್ಯವಿಲ್ಲ. ಸತತವಾಗಿ ಅಧ್ಯಯನ ಮಾಡಿ ಗುರಿ ಸಾಧನೆಯಿಂದ ಹಿಂದೆ ಸರಿಯದವರು ಖಂಡಿತಾ ಯಶಸ್ವಿಯಾಗುತ್ತಾರೆ ಎಂದು ಮೈಸೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಟಿ.ಹೀರಾಲಾಲ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಜ್ಞಾನೋದಯ ಪದವಿ ಪೂರ್ವ ಕಾಲೇಜಿನ (ಜ್ಞಾನ ಶಾರದಾ) ಶ್ರೀ ವಿದ್ಯಾತೀರ್ಥ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 26 ದಿನಗಳ ಪಿಯು- ಸಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಭ ಹಾರೈಸಿ ಅವರು ಮಾತನಾಡಿದರು.ಎಲ್ಲರಲ್ಲೂ ಜಾಣತನ ಇದ್ದೇ ಇರುತ್ತದೆ. ಇದರೊಟ್ಟಿಗೆ ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಅಧ್ಯಾಪಕನೋ, ಇಂಜಿನಿಯರೋ, ವೈದ್ಯನೋ ಅಥವಾ ಸಾರ್ವಜನಿಕ ಸೇವಕನೋ ಎನ್ನುವುದನ್ನು ನಿರ್ಧರಿಸಿಕೊಂಡು ತಯಾರಿ ಮಾಡಿಕೊಳ್ಳಿ. ನಾನು ಹಳ್ಳಿಯಿಂದ ಬಂದವನು. ನನ್ನ ತಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದವರು. ಆದರೆ ಶಿಕ್ಷಣವೇ ನನ್ನ ಮೊದಲ ಆದ್ಯತೆಯಾಗಿತ್ತು. ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದು ನಂತರ ಕೃಷಿಯಲ್ಲಿ ಪದವಿ ಪಡೆದು ಐಎಫ್ಎಸ್ ಪರೀಕ್ಷೆಯನ್ನು ೨೪ನೇ ರ್ಯಾಂಕ್ನೊಂದಿಗೆ ಉತ್ತೀರ್ಣನಾದೆ. ಅಂದರೆ ನಿಮ್ಮ ಗುರಿ, ಅಧ್ಯಯನದ ಕ್ರಮದಿಂದಲೇ ಬದುಕು ಕಟ್ಟಿಕೊಳ್ಳಬಹುದೇ ಹೊರತು ಅದೃಷ್ಟದಿಂದ ಅಲ್ಲವೇ ಅಲ್ಲ ಎಂದು ನುಡಿದರು.
ಸಾಧನೆಗೆ ತಾರತಮ್ಯವಿಲ್ಲ, ಕಠಿಣ ಪರಿಶ್ರಮ , ಪೂರ್ವ ತಯಾರಿ ಮುಖ್ಯ: ಹೀರಾಲಾಲ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.