ಮೈಸೂರು: ಎರಡು ವರ್ಷಗಳ ಬಳಿಕ ಆಷಾಢ ಶುಕ್ರವಾರದ ಮೊದಲ ದರ್ಶನಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ ಬಾಗಿಲು ತೆರೆದಿದ್ದು, ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಮುಂಜನಾನೆ 5.30ರಿಂದಲೇ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರಿಂದಾಗಿ ಭಕ್ತರು ಚಾಮುಂಡಿಬೆಟ್ಟದ ಪಾದದ ಮೂಲಕ ಅರಿಶಿನ ಮತ್ತು ಕುಂಕುಮನ್ನು ಮೆಟ್ಟಿಲಿಗೆ ಹಚ್ಚುತ್ತಾ ಬೆಟ್ಟವೇರಿ ತಾಯಿಯ ದರ್ಶನ ಪಡೆದರೆ, ಇನ್ನೊಂದೆಡೆ ಬಸ್ ಗಳಲ್ಲಿ ತೆರಳಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಈ ಬಾರಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರಿಂದ ಭಕ್ತರು ಸಲೀಸಲಾಗಿ ದೇವಿಯ ದರ್ಶನ ಪಡೆಯಲು ಅನುಕೂಲವಾಯಿತು. ಆಷಾಢ ಶುಕ್ರವಾರದ ಹಿನ್ನಲೆಯಲ್ಲಿ ತಾಯಿ ಚಾಮುಂಡೇಶ್ವರಿ ಸೇರಿದಂತೆ ದೇಗುಲದ ಒಳಾವರಣದಲ್ಲಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ ಆಷಾಢ ಮಾಸ ಬಹಳ ವಿಶೇಷವಾದ ಮತ್ತು ಶಕ್ತಿದೇವತೆಗೆ ಹೆಚ್ಚು ಒತ್ತು ನೀಡುವ ಮಾಸವಾಗಿದ್ದು, ಈ ಮಾಸದಲ್ಲಿ ಶಕ್ತಿಯ ಆರಾಧನೆಯನ್ನು ಮಾಡಲಾಗುತ್ತದೆ. ಆಷಾಢ ಶುಕ್ರವಾರ ಹಿನ್ನಲೆಯಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಮುಂಜಾನೆ ಮೂರುವರೆ ಗಂಟೆಯಿಂದಲೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಅಮ್ಮನವರಿಗೆ ಲಕ್ಷ್ಮಿ ಅಲಂಕಾರವನ್ನು ಮಾಡಲಾಗಿದೆ ಎಂದು ಹೇಳಿದರು.
ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಕಳೆದೆರಡು ವರ್ಷಗಳ ನಂತರ ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿಯ ದರ್ಶನವನ್ನು ಭಕ್ತರು ಪಡೆಯುತ್ತಿದ್ದಾರೆ. ಅದಂತೆ ನಾನು ಕುಟುಂಬ ಸಮೇತ ತಾಯಿಯ ದರ್ಶನಕ್ಕೆ ಬಂದಿದ್ದೇವೆ. ಈ ರೀತಿಯ ವ್ಯವಸ್ಥೆ ಹಿಂದೆಂದೂ ಆಗಿರಲಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಸಚಿವ ಎಸ್. ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಮಾಡಿದ್ದೇವೆ. ಜನರು ಅತ್ಯಂತ ಸಂತೋಷದಿಂದ ಬಂದಿದ್ದಾರೆ. ಉಚಿತ ಬಸ್ಸಿನ ವ್ಯವಸ್ಥೆ ಎಲ್ಲವನ್ನೂ ಅತ್ಯಂತ ಸುವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ಹೇಳಿದರು. ಬೆಳಿಗ್ಗೆ 5.30ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ರಾತ್ರಿ 9ಗಂಟೆವರೆಗೆ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆಯಬಹುದಾಗಿದೆ.