ಮೈಸೂರು: ನಗರದಿಂದ ಚಾಮುಂಡಿಬೆಟ್ಟಕ್ಕೆ ತೆರಳುವ ರಸ್ತೆಯ ಕೆಸಿ ಲೇಔಟ್ ನಲ್ಲಿರುವ ಮರಳು ಮ್ಯೂಸಿಯಂಗೆ ಈಗ ಹೊಸ ಕಳೆ ಬಂದಿದೆ. ಕಾರಣ ಮೈಸೂರಿನಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಅವರ ವಿವಿಧ ಯೋಗದ ಭಂಗಿಯನ್ನು ಮರಳಿನಲ್ಲಿ ನಿರ್ಮಿಸಲಾಗಿದೆ.
ಇದು ಈಗ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯುತ್ತಿದೆ. ಇದನ್ನು ಮರಳು ಶಿಲ್ಪ ಕಲಾವಿದೆ ಎಂ.ಎನ್. ಗೌರಿ ಅವರು ನಿರ್ಮಿಸಿದ್ದು, ತಮ್ಮ ಮ್ಯೂಸಿಯಂನಲ್ಲಿರುವ ನೂರಾರು ಕಲಾಕೃತಿಗಳ ನಡುವೆ ಗಮನಸೆಳೆಯುತ್ತಿದೆ. ಮೋದಿ ಅವರು ಮೈಸೂರಿಗೆ ಆಗಮಿಸಿ ಯೋಗದಲ್ಲಿ ಗಮನಸೆಳೆಯುತ್ತಿರುವುದು ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಇದೀಗ ಮರಳಿನ ಅವರ ಶಿಲ್ಪಗಳು ಅಭಿಮಾನಗಳು ಹುಬ್ಬೇರಿಸುವಂತೆ ಮಾಡಿದೆ.
ಹಾಗೆನೋಡಿದರೆ ಮೈಸೂರು ಯೋಗ ವಿಷಯದಲ್ಲಿ ದೇಶ ವಿದೇಶಗಳ ಜನರ ಗಮನ ಸೆಳೆದಿದೆ. ಯೋಗ ಕಲಿಯಲೆಂದೇ ದೇಶ ವಿದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಯೋಗದ ಪರಿಚಯ ಮಾಡಿಕೊಡುವ ಕೆಲಸವನ್ನು ಕಲಾವಿದೆ ಗೌರಿ ಅವರು ಮಾಡಿದ್ದಾರೆ. ಸದ್ಯ ಮೋದಿ ಅವರು ವಿವಿಧ ಭಂಗಿಗಳಲ್ಲಿ ಯೋಗಾಸನ ಮಾಡುತ್ತಿರುವ ಮರಳಿನ ಶಿಲ್ಪಗಳು ಸುಂದರವಾಗಿ ಮೂಡಿ ಬಂದಿದ್ದು, ಅವರ ಶ್ರಮವನ್ನು ಮೆಚ್ಚಿ ಜನ ಅಭಿನಂದನೆಗಳ ಸುರಿಮಳೆಗೈಯ್ಯುತ್ತಿದ್ದಾರೆ.