ಕೃಷ್ಣರಾಜಪೇಟೆ : ವಿದ್ಯುತ್ ಪ್ರವಹಿಸಿ ಅಕಾಲಿಕವಾಗಿ ಮೃತಪಟ್ಟಿದ್ದ ವಾನರನಿಗೆ ಹಾಲುತುಪ್ಪ ಹಾಗೂ ಪುಣ್ಯತಿಥಿ ಕಾರ್ಯವನ್ನು ಪಟ್ಟಣದ ಪುರಸಭೆ ವ್ಯಾಪ್ತಿಯ 5ನೇ ವಾರ್ಡಿನ ವಿನಾಯಕನಗರ ಬಡಾವಣೆಯಲ್ಲಿ ನಡೆಸಲಾಯಿತು.
ಈ ವೇಳೆ ನಿವಾಸಿಗಳು ವೆಜಿಟೇಬಲ್ ಬಾತ್, ಕೇಸರಿಬಾತ್ ಮಾಡಿಸಿ ಪುಣ್ಯತಿಥಿಯ ಪ್ರಸಾದ ವಿತರಿಸಿ ವಾನರನ ಆತ್ಮಕ್ಕೆ ಚಿರಶಾಂತಿ ಕೋರಿದರು. ವಿನಾಯಕ ನಗರದಲ್ಲಿ ವಾಸವಾಗಿದ್ದ ಈ ವಾನರ ಜನರ ಪ್ರೀತಿಗೆ ಪಾತ್ರವಾಗಿತ್ತು. ಕಳೆದ 6 ತಿಂಗಳಿನಿಂದಲೂ ಬಡಾವಣೆಯಲ್ಲಿಯೇ ವಾಸವಾಗಿದ್ದು ಜನಸಾಮಾನ್ಯರೊಂದಿಗೆ ಹೊಂದಿಕೊಂಡು ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿತ್ತು. ಆದರೆ ಕಳೆದ 11 ದಿನಗಳ ಹಿಂದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ವಿನಾಯಕ ನಗರದ ನಿವಾಸಿಗಳು ಹಾಗೂ ಸಾರ್ವಜನಿಕರು ಶವಸಂಸ್ಕಾರ ಮಾಡಿದ್ದ ಜಾಗದಲ್ಲಿ ಹಾಲುತುಪ್ಪ ಹಾಕಿ ವೈಕುಂಠ ಸಮಾರಾಧನೆ ನಡೆಸಿ ಮೃತ ವಾನರನ ಆತ್ಮಕ್ಕೆ ಚಿರಶಾಂತಿ ಕೋರಿದರು.
ಈ ವಾನರ ಅಕಾಲಿಕವಾಗಿ ವಿದ್ಯುತ್ ಪ್ರವಹಿಸಿ ಸಾವಿಗೆ ಶರಣಾಗಿದ್ದಾಗ ಇಡೀ ಬಡಾವಣೆಯ ನಿವಾಸಿಗಳು ಕಣ್ಣೀರು ಹಾಕಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇದೀಗ ವಿನಾಯಕ ನಗರದ ನಿವಾಸಿಗಳು 11ನೇ ದಿನದ ಪುಣ್ಯತಿಥಿ ಕಾರ್ಯ ನಡೆಸಿದ್ದಾರೆ. ಪಟ್ಟಣದ ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಶಂಕರ್ ದಂಪತಿಹಾಗೂ ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್ ದಂಪತಿ ಹಾಲುತುಪ್ಪ ಪುಣ್ಯತಿಥಿ ಕಾರ್ಯದ ವಿಧಿವಿಧಾನಗಳನ್ನು ನಡೆಸಿಕೊಟ್ಟರು.