ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಸೆ.26 ರಂದು ಕರಗೋತ್ಸವದ ಮೂಲಕ ಆರಂಭಗೊಳ್ಳಲಿದ್ದು, ಸಂಪ್ರದಾಯದಂತೆ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಜಿ.ವಿ.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಪ್ರಧಾನ ಅರ್ಚಕ ಎಂ.ಬಾಲಕೃಷ್ಣ, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಪಿ.ಎ.ಲೋಕನಾಥ್, ಜಿ.ಎ.ಉಮೇಶ್, ಶ್ರೀಕೋಟೆ ಮಾರಿಯಮ್ಮ ದೇವಾಲಯದ ಪಿ.ಬಿ.ಅನೀಶ್ ಕುಮಾರ್ ಹಾಗೂ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಪಿ.ಎಂ.ನವೀನ್ ಕುಮಾರ್ ಮತ್ತಿತರ ಪ್ರಮುಖರು ಕರಗೋತ್ಸವ ಮತ್ತು ಕರಗಗಳ ನಗರ ಸಂಚಾರದ ಕುರಿತು ಚರ್ಚಿಸಿದರು.
ಸೆ.26 ರಂದು ಮಧ್ಯಾಹ್ನ ನಾಲ್ಕೂ ಶಕ್ತಿ ದೇವತೆಗಳ ದೇವಾಲಯಗಳಿಂದ ಪಂಪಿನ ಕೆರೆಗೆ ತೆರಳುವುದು. ಸಂಪ್ರದಾಯದತೆ ಕರಗ ಕಟ್ಟಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ನಗರ ಸಂಚಾರ ಆರಂಭಿಸುವುದು. ಮಳೆಯ ವಾತಾವರಣವಿರುವ ಕಾರಣ ಸಂಜೆ 5 ಗಂಟೆಗೆ ನಗರ ಸಂಚಾರ ಆರಂಭಿಸಲು ನಿರ್ಣಯಿಸಲಾಯಿತು. ಕರಗ ದೇವಾಲಯಗಳಿಗೆ ತಲಾ ಎರಡು ಲಕ್ಷ ರೂ. ಅನುದಾನ ನೀಡುತ್ತಿದ್ದು, ಈ ಮೊತ್ತವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಬೇಡಿಕೆ ಮಂಡಿಸಲು ಸಭೆ ನಿರ್ಧಾರ ಕೈಗೊಂಡಿತು.
ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.