ಮೈಸೂರು: ದಸರಾ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಅ.1ರಂದು ಜೆ.ಕೆ.ಮೈದಾನದಲ್ಲಿ ನಡೆಯಲಿದ್ದು,ಅ.2ರಂದು ನಗರದ ಹಾಕಿ ಮೈದಾನದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಚಾರ್ಲಿ 777 ಸಿನಿಮಾ ಖ್ಯಾತಿಯ ಶ್ವಾನ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ರೈತ ದಸರಾ ಉಪ ವಿಶೇಷಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಕೃಷ್ಣರಾಜು ಅವರು, ಸೆ.29ರಂದು ಗೋಪಾಲಕರು ಹಸುಗಳೊಂದಿಗೆ ಆಗಮಿಸಬೇಕು. 30ರಂದು ವಿಶ್ರಾಂತಿ,ಅ.1ರಂದು ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಡಿ.ನಾಗಭೂಷಣ ಮಾತನಾಡಿ,ಸಂಘದಿಂದ ಪ್ರತಿ ವರ್ಷ ತೂಗುದೀಪ್ ಶ್ರೀನಿವಾಸ್ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.5 ವರ್ಷಗಳಿಂದ ದಸರಾದಲ್ಲೂ ಸ್ಫರ್ಧೆ ನಡೆಯುತ್ತಿದೆ. ಕೊರೊನಾದಿಂದ 3 ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗಿಲ್ಲ ಎಂದು ಹೇಳಿದರು.
ಮಳೆ ನೀರು ಸೋರದಂತೆ ಶಾಮಿಯಾನ ಹಾಕಬೇಕು.ಕುಡಿಯುವ ನೀರುವ್ಯವಸ್ಥೆ ಕಲ್ಪಿಸಬೇಕು.ಡ್ರಮ್ ನೀಡಬೇಕು. ಹಸಿಹುಲ್ಲು,ಒಣಹುಲ್ಲು ನೀಡಬೇಕು.ಸೊಳ್ಳೆ ನಿಯಂತ್ರಿಸಬೇಕು. ಶೆಡ್ಗೊಂದು ಫ್ಯಾನ್ ಅಳವಡಿಸಬೇಕು.ಗೋಪಾಲಕರಿಗೆ ಟೀಶರ್ಟ್,ಕ್ಯಾಪ್ ನೀಡಬೇಕು ಎಂದು ಮನವಿ ಮಾಡಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ 50 ಸಾವಿರ ರೂ.,ದ್ವಿತೀಯ 40ಸಾವಿರ ರೂ.,ತೃತೀಯ 30 ಸಾವಿರ ರೂ.,20 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದು ವಿವರಿಸಿದರು.
ಅ.2ರಂದು ಮೈಸೂರು ಹಾಕಿ ಮೈದಾನದಲ್ಲಿ ಆಯೋಜಿಸಿರುವ ಮುದ್ದು ಪ್ರಾಣಿಗಳ ಪ್ರದರ್ಶನದ ವೇಳೆ ಚಾರ್ಲಿ 777 ಸಿನಿಮಾ ಖ್ಯಾತಿಯ ಶ್ವಾನ ಭಾಗವಹಿಸಲಿದೆ. ಚಾರ್ಲಿ ಸಿನಿಮಾದ ನಿರ್ದೇಶಕರು ಮತ್ತು ನಟ ರಕ್ಷಿತ್ ಶೆಟ್ಟಿ ಆಹ್ವಾನಕ್ಕೆ ಪ್ರಯತ್ನಿಸುವುದಾಗಿ ರೈತ ದಸರಾ ಸಮಿತಿ ಕಾರ್ಯದರ್ಶಿ ಡಾ.ಷಡಕ್ಷರಿ ಮೂರ್ತಿ ತಿಳಿಸಿದರು.
ವಿವಿಧ ಜಾತಿಯ ಶ್ವಾನಗಳು, ಪಕ್ಷಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಗಣಪತಿ ಸಚ್ಚಿದಾನಂದ ಆಶ್ರಮದಿಂದ ಗಿಣಿಗಳನ್ನು ತರಲಾಗುವುದು. ಆಕ್ವೇರಿಯಂ ಮೀನುಗಳ ಪ್ರದರ್ಶನ ಇರುತ್ತದೆ. ಎಲ್ಲ ಪಶು ಆಸ್ಪತ್ರೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ದಸರಾ ಕಾರ್ಯಾಧ್ಯಕ್ಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ,ಸೆ.30 ರಂದು ಬೆಳಗ್ಗೆ 9,30ಕ್ಕೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ, ಬೆಳಿಗ್ಗೆ 10.30ಕ್ಕೆ ಕೃಷಿ ವಸ್ತುಪ್ರದರ್ಶನ ಉದ್ಘಾಟನೆ, ರೈತರಿಗೆ ಸನ್ಮಾನ,ರೈತರೊಂದಿಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದರು.