ಮಡಿಕೇರಿ, ಆ.9: ಹಾಕತ್ತೂರು, ತೊಂಭತ್ತು ಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಆ.15 ರಂದು ಸ್ವಾತಂತ್ರ್ಯ ಅಮೃತಮಹೋತ್ಸವ, ಮಾಜಿ ಸೇನಾನಿಗಳಿಗೆ ಗೌರವ ಸಮರ್ಪಣೆ ಹಾಗೂ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೊಡಗು ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಹಾಕತ್ತೂರು ಗ್ರಾ.ಪಂ, ಹಾಕತ್ತೂರು ಪ್ರೌಢ ಶಾಲೆ, ಕುವೆಂಪು ಮಾದರಿ ಪ್ರಾಥಮಿಕ ಶಾಲೆ ಹಾಗೂ ತೊಂಭತ್ತುಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಮೃತ ಮಹೋತ್ಸವದ ಅಂಗವಾಗಿ ಅಂದು ಬೆಳಗ್ಗೆ 9.30 ಗಂಟೆಗೆ ಹಾಕತ್ತೂರು ಗ್ರಾ.ಪಂ ಆವರಣದಿಂದ ಸಮರ್ಪಣಾ ಜಾಥಾ ಹೊರಡಲಿದ್ದು, ಬೆಳಗ್ಗೆ 10.30 ಗಂಟೆಗೆ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾಕತ್ತೂರು ಗ್ರಾ.ಪಂ ಅಧ್ಯಕ್ಷೆ ಸವಿತಾ, ಮೇಕೇರಿ ಗ್ರಾ.ಪಂ ಅಧ್ಯಕ್ಷ ದಿನೇಶ್, ನಿವೃತ್ತ ಸೇನಾಧಿಕಾರಿಗಳಾದ ಮೇಜರ್ ಬಿ.ಎ.ನಂಜಪ್ಪ, ಮೇಜರ್ ಟಿಮ್ಸ್, ಪಾಣತ್ತಲೆ ಉತ್ತಯ್ಯ, ತೊಂಭತ್ತುಮನೆ ತ್ರೀನೇತ್ರ ಯುವಕ ಸಂಘದ ಗೌರವ ಅಧ್ಯಕ್ಷ ನರಸಿಂಹ ಮೂರ್ತಿ, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಮಾಜಿ ಸೈನಿಕ ರಾಮಚಂದ್ರ, ಹಾಕತ್ತೂರು ಸರಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಹೇಮಾವತಿ, ಮುಖ್ಯೋಪಾಧ್ಯಾಯರಾದ ನೀತಾಕುಮಾರಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಞರ ಸಾಬು ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.
ಕುವೆಂಪು ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸ್ವಾಮಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಚಂದ್ರಿಕಾ, ದಾನಿಗಳಾದ ಉಮಾ ಗೌರಿ, ದೇವಣಿರ ತಿಲಕ್ ಪೊನ್ನಪ್ಪ, ಉದಿಯಂಡ ವಿವೇಕ್ ಮುತ್ತಪ್ಪ, ಉಳುವಾರನ ಪಳಂಗಪ್ಪ, ಬಿದ್ದಂಡ ವೀಣಾ ನಂಜಪ್ಪ, ದಂಬೇಕೋಡಿ ಲೀಲಾವತಿ ಚಿಣ್ಣಪ್ಪ, ಶ್ರೀಪತಿ ಹೆಬ್ಬಾರ್, ದೇವಜನ ನಾಣಯ್ಯ, ಪಿ.ವಿ.ಅಶೋಕ್, ಬೊಪ್ಪಂಡ ವೀಣಾ ಸೋಮಣ್ಣ, ಹಾಕತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ನಿವೃತ್ತ ಸೈನಿಕ ಚಂಗಪ್ಪ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ತೊಂಭತ್ತುಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಕತ್ತೂರು ಕುವೆಂಪು ಶತಮಾನೋತ್ಸವ ಶಾಲೆ, ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಹಾಗೂ ಕುಶಾಲನಗರದ ನಾದಾಂತ ನಾಟ್ಯಮಾಯೂರಿ ನೃತ್ಯಾಲಯದ ಮಂಜು ಭಾರ್ಗವಿ ಮತ್ತು ತಂಡದಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ತ್ರಿನೇತ್ರ ಯುವಕ ಸಂಘದ ಪ್ರಕಟಣೆ ತಿಳಿಸಿದೆ.